ADVERTISEMENT

ಮತ ಚಲಾವಣೆಯಲ್ಲಿ ಪ್ರಾಮಾಣಿಕತೆ ತೋರದಿದ್ದರೆ ಆತ್ಮವಂಚನೆ

​ಪ್ರಜಾವಾಣಿ ವಾರ್ತೆ
Published 23 ಜುಲೈ 2017, 10:41 IST
Last Updated 23 ಜುಲೈ 2017, 10:41 IST

ಕೋಲಾರ: ‘ಮತ ಚಲಾವಣೆಯಲ್ಲಿ ಪ್ರಾಮಾಣಿಕತೆ ತೋರದಿದ್ದರೆ ಆತ್ಮ ವಂಚನೆ ಮಾಡಿಕೊಂಡಂತೆ. ಹೀಗಾಗಿ ಮತದಾನದ ವೇಳೆ ಯಾವುದೇ ಆಮಿಷಕ್ಕೆ ಒಳಗಾಗಬೇಡಿ’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಮತದಾನದ ಮಹತ್ವ ಕುರಿತು ಜಿಲ್ಲಾಡಳಿತವು ನಗರದ ಸರ್ಕಾರಿ ಬಾಲಕರ ಸರ್ಕಾರಿ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿದ್ಯಾರ್ಥಿಗ ಳೊಂದಿಗಿನ ಸಂವಾದದಲ್ಲಿ ಮಾತನಾ ಡಿದ ಅವರು, ‘ಮತದಾರರು ತಮ್ಮ ಹಕ್ಕು ಚಲಾಯಿಸಿದರೆ ಮಾತ್ರ ಯಾವುದೇ ಸಮಸ್ಯೆ ಪ್ರಶ್ನಿಸಲು ಸಾಧ್ಯ. ಆದರೆ, ಮತದಾನದ ಹಕ್ಕನ್ನೇ ಚಲಾಯಿ ಸದವರಿಗೆ ಸರ್ಕಾರ ಸರಿಯಿಲ್ಲ ಎಂದು ಆರೋಪಿಸುವ ನೈತಿಕ ಹಕ್ಕಿಲ್ಲ’ ಎಂದರು.

‘ಚುನಾವಣೆಗಳಲ್ಲಿ ಹಣ ಹಂಚು ವುದು ಸಾಮಾನ್ಯ. ಆದರೆ, ಮತದಾರರು ಈ ಬಗ್ಗೆ ಜಾಗೃತರಾಗಿರಬೇಕು. ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳ ವ್ಯಕ್ತಿತ್ವ ನೋಡಿ ಮತ ಹಾಕಬೇಕು. ಆಗ ಮಾತ್ರ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳನ್ನು ಮುಲಾಜಿಲ್ಲದೆ ಪ್ರಶ್ನಿಸಬಹುದು’ ಎಂದು ಹೇಳಿದರು.

ADVERTISEMENT

ಶೇ 65ರಷ್ಟು ಮತದಾನ: ‘ಹಿಂದಿನ ಲೋಕಸಭಾ ಚುನಾವಣೆಯಲ್ಲಿ ಕೋಲಾರ ಕ್ಷೇತ್ರದಲ್ಲಿ ಶೇ 65ರಷ್ಟು ಮಾತ್ರ ಮತದಾನವಾಗಿತ್ತು. ಉಳಿದ ಶೇ 35ರಷ್ಟು ಮಂದಿ ಮತ ಚಲಾಯಿಸಲೇ ಇಲ್ಲ. ಯುವ ಮತದಾರರು ಮತದಾನ ದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವ ಜತೆಗೆ ಪ್ರಾಮಾಣಿಕತೆ ಬಗ್ಗೆ ಪೋಷಕರಿಗೆ ಅರಿವು ಮೂಡಿಸಬೇಕು’ ಎಂದರು.

ಪ್ರಜಾಪ್ರಭುತ್ವದ ಅಡಿಗಲ್ಲು: ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿ ಮಾತನಾಡಿ, ‘ಚುನಾವಣೆ ಪ್ರಕ್ರಿಯೆ ಯನ್ನು ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಮತದಾರರು ಪ್ರಮುಖ ಪಾತ್ರ ವಹಿಸಬೇಕು. ಸಾರ್ವತ್ರಿಕ ಚುನಾವ ಣೆಗಳು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಗಲ್ಲು. ಮತದಾನದ ಮೂಲಕ ಉತ್ತಮ ಸರ್ಕಾರ ರಚಿಸಿದರೆ ಅದರ ಪ್ರಯೋಜನವನ್ನು ಜನರೇ ಪಡೆದು ಕೊಳ್ಳಬಹುದು’ ಎಂದು ತಿಳಿಸಿದರು.

‘ವಿಯೆಟ್ನಾಂನಲ್ಲಿ ಸೇನಾ ಆಡಳಿತ ವಿದ್ದು, ಅಲ್ಲಿನ ಪ್ರಜೆಗಳು ಭಯದ ವಾತಾವರಣದಲ್ಲಿ ಬದುಕುತ್ತಿದ್ದಾರೆ. ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿ ದ್ದು, ಜನರಿಗೆ ಆ ಪರಿಸ್ಥಿತಿ ಇಲ್ಲ. ಪ್ರತಿ ಮತವೂ ಮುಖ್ಯ ಎನ್ನುವುದಕ್ಕೆ ಗುಜರಾತ್‌ನಲ್ಲಿ ನಡೆದ ಚುನಾವಣೆ ಉದಾಹರಣೆಯಾಗಿದ್ದು, ಅಲ್ಲಿ ಒಬ್ಬ ಅಭ್ಯರ್ಥಿ 62,216 ಮತ ಪಡೆದು ಜಯ ಗಳಿಸಿದರೆ, ಮತ್ತೊಬ್ಬ ಅಭ್ಯರ್ಥಿ 62,215 ಮತ ಗಳಿಸಿ ಕೇವಲ ಒಂದು ಮತದ ಅಂತರದಲ್ಲಿ ಸೋತರು. 18 ವರ್ಷ ಪೂರೈಸಿದ ಪ್ರತಿಯೊಬ್ಬರೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬೇಕು’ ಎಂದರು.

‘ಸೂಕ್ತ ದಾಖಲೆಪತ್ರಗಳೊಂದಿಗೆ ಚುನಾವಣಾ ಶಾಖೆಗೆ ತೆರಳಿ ಅರ್ಜಿ ಸಲ್ಲಿಸಿದರೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಯಾಗುವುದರ ಜತೆಗೆ ಗುರುತಿನ ಚೀಟಿ ಮನೆ ಬಾಗಿಲಿಗೆ ಬರುತ್ತದೆ. ಈ ವಿಷಯದಲ್ಲಿ ಯುವ ಮತದಾರರು ನಿರ್ಲಕ್ಷ್ಯ ತೋರಬಾರದ’ ಎಂದು ಮನವಿ ಮಾಡಿದರು. ಕಾಲೇಜಿನ ಪ್ರಾಂಶುಪಾಲ ಎಸ್.ವಿ. ವೆಂಕಟಸ್ವಾಮಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.