ADVERTISEMENT

ಮುಳಬಾಗಲು: ಕಾಂಗ್ರೆಸ್‌ ಅಧಿಕಾರಕ್ಕೆ

ಅಧ್ಯಕ್ಷರಾಗಿ ಎಂ.ಸಿ.ನೀಲಕಂಠೇಗೌಡ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಮೇ 2016, 5:22 IST
Last Updated 6 ಮೇ 2016, 5:22 IST

ಮುಳಬಾಗಲು: ಮುಳಬಾಗಲು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ, ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಯಳಚೇಪಲ್ಲಿ ಕ್ಷೇತ್ರದ ಕಾಂಗ್ರೆಸ್‌ ಸದಸ್ಯ ಎಂ.ಸಿ.ನೀಲಕಂಠೇಗೌಡ, ಉಪಾಧ್ಯಕ್ಷೆಯಾಗಿ ಊರುಕುಂಟೆ ಮಿಟ್ಟೂರು ಕ್ಷೇತ್ರದ ಸದಸ್ಯೆ ಟಿ.ಸುಜಾತಾ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಉಪವಿಭಾಗಧಿಕಾರಿ ಸಿ.ಎನ್.ಮಂಜುನಾಥ್ ಚುನಾವಣಾ ಪ್ರಕ್ರಿಯೆಗಳನ್ನು ನಡೆಸಿದರು. ತಾಲ್ಲೂಕು ಪಂಚಾಯಿತಿ 21 ಸದಸ್ಯ ಸ್ಥಾನಗಳಲ್ಲಿ ಕಾಂಗ್ರೆಸ್‌ 11, ಜೆಡಿಎಸ್‌ 8 ಹಾಗೂ ಇಬ್ಬರು ಪಕ್ಷೇತರರು ಇದ್ದಾರೆ. ಪಕ್ಷೇತರ ಸದಸ್ಯ  ರವಿಶಂಕರ್‌ ಅವರು ಕಾಂಗ್ರೆಸ್‌ ಬೆಂಬಲಿಸಿದ್ದರು. ಜೆಡಿಎಸ್‌ನ 8 ಸದಸ್ಯರಲ್ಲಿ  ಸುಬ್ಬಾರೆಡ್ಡಿ, ನಾರಾಯಣಮ್ಮ ಸಭೆಗೆ ಗೈರು ಹಾಜರಾಗಿದ್ದರು.

ಇಬ್ಬರು ಪಕ್ಷೇತರರ ಬೆಂಬಲ ಹಾಗೂ ಕಾಂಗ್ರೆಸ್‌ ಸದಸ್ಯರೊಬ್ಬರನ್ನು ಸೆಳೆದು ಅಧಿಕಾರ ರಚಿಸಲು ಜೆಡಿಎಸ್‌ ಮಾಡಿದ ಯತ್ನ ಫಲಗೂಡಲಿಲ್ಲ. ಪಕ್ಷದೊಳಗಿನ ಒಳಗಿನ ಭಿನ್ನಮತ ಜೆಡಿಎಸ್‌ ಕನಸಿಗೆ ತಣ್ಣೀರೆರಚಿತು ಎಂದು ಹೇಳಲಾಗಿದೆ. ಕಾಂಗ್ರೆಸ್‌ ಬೆಂಬಲಿಸಿದ ರವಿಶಂಕರ್‌ ಚುನಾವಣೆ ಬಳಿಕ  ಆವಣಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಮಲಿಂಗರೆಡ್ಡಿ,  ಎಂ.ಸಿ.ನೀಲಕಂಠೇಗೌಡ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಕಾಂಗ್ರೆಸ್ ಕಾರ್ಯಕರ್ತರು ಹಾಗೂ  ಬೆಂಬಲಿಗರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ನಂತರ ಶಾಸಕರ ಕಚೇರಿವರೆಗೂ ಮೆರವಣಿಗೆ ನಡೆಸಿದರು.

ಅಧಿಕಾರ ಹಂಚಿಕೆ
ಮೊದಲ ಎರಡು ವರ್ಷ ಅವಧಿಗೆ ನೀಲಕಂಠೇಗೌಡ, ನಂತರದ ಮೂರು ವರ್ಷದ ಅವಧಿಗೆ  ಪದ್ಮಘಟ್ಟ ಕ್ಷೇತ್ರದ ಸದಸ್ಯ ಗಂಗರೆಡ್ಡಿ  ಹಾಗೂ  ತಾಯಲೂರು ಕ್ಷೇತ್ರದ ಸದಸ್ಯ ಎ.ವಿ.ಶ್ರೀನಿವಾಸ್ ಅವರ ನಡುವೆ ಅಧಿಕಾರ ಹಂಚಿಕೆಯಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.