ADVERTISEMENT

ಮೇ ತಿಂಗಳಲ್ಲಿ ತಾಲ್ಲೂಕು ಕೇಂದ್ರ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2017, 5:49 IST
Last Updated 22 ಮಾರ್ಚ್ 2017, 5:49 IST

ಕೆಜಿಎಫ್‌: ತಿಂಗಳೊಳಗೆ ಕೆಜಿಎಫ್ ತಾಲ್ಲೂಕು ಚಾಲನೆಗೆ ಬರಲಿದ್ದು, ಕಚೇರಿಗಳಿಗೆ ಬೃಹತ್‌ ಕಟ್ಟಡದ ಹುಡುಕಾಟ ನಡೆದಿದೆ ಎಂದು ಸಂಸದ ಕೆ.ಎಚ್‌.ಮುನಿಯಪ್ಪ ಹೇಳಿದರು.

ರಾಬರ್ಟಸನ್‌ಪೇಟೆ ಪ್ರಸನ್ನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಸೋಮವಾರ ರಾತ್ರಿ ನಡೆದ ಬೃಂದಾವನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಜಿಎಫ್‌ ತಾಲ್ಲೂಕು ಬೇಡಿಕೆ ಬಹು ವರ್ಷದ ಬೇಡಿಕೆಯಾಗಿತ್ತು.

ಮುಖಂಡರಾದ ರೂಪ ಶಶಿಧರ್‌ ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್‌ ಮುಖಂಡರು ನಡೆಸಿದ ಪ್ರಯತ್ನಕ್ಕೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಸ್ಪಂದಿಸಿದ್ದಾರೆ. ಮೇ ತಿಂಗಳಲ್ಲಿ ಕೆಜಿಎಫ್  ನಗರಕ್ಕೆ ಬರಲಿರುವ ಮುಖ್ಯಮಂತ್ರಿ, ನೂತನ ತಾಲ್ಲೂಕು ಕೇಂದ್ರವನ್ನು ಅಧಿಕೃತವಾಗಿ ಉದ್ಘಾಟಿಸಲಿದ್ದಾರೆ ಎಂದರು.

ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಸೂಕ್ತ ಜಾಗದ ಹುಡುಕಾಟಕ್ಕಾಗಿ ನಗರಸಭೆ ಅಧ್ಯಕ್ಷ ರಮೇಶ್‌ಕುಮಾರ್‌, ಮಾಜಿ ಅಧ್ಯಕ್ಷ ಕೆ.ಸಿ.ಮುರಳಿ, ಜಿಲ್ಲಾಪಂಚಾಯತಿ  ಮಾಜಿ ಸದಸ್ಯರಾದ ಅ.ಮು.ಲಕ್ಷ್ಮಿನಾರಾಯಣ ಮತ್ತು ಆರ್. ನಾರಾಯಣರೆಡ್ಡಿ ಅವರ ಸಮಿತಿ ರಚಿಸಲಾಗಿದೆ ಎಂದರು.
ಚಿನ್ನದ ಗಣಿ ಕಾರ್ಮಿಕರಿಗೆ ಬರಬೇಕಾದ ಹಣ ಪಾವತಿಯಾಗಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

ಮುಖಂಡ ರೂಪ ಶಶಿಧರ್‌ ಮಾತನಾಡಿ, ಶ್ರೀನಿವಾಸಪುರದಲ್ಲಿ ಪ್ರಾರಂಭವಾಗುವ ರೈಲ್‌ ಕೋಚ್‌ ಕಾರ್ಖಾನೆಗೆ ಬೇಕಾದ ಸಹಾಯಕ ಉತ್ಪಾದನಾ ಕೇಂದ್ರಗಳನ್ನು ಕೆಜಿಎಫ್  ನಗರದಲ್ಲಿ ಪ್ರಾರಂಭಿಸಬೇಕು ಎಂದರು.

ನಗರಸಭೆ ಅಧ್ಯಕ್ಷ ರಮೇಶ್‌ಕುಮಾರ್‌, ಉಪಾಧ್ಯಕ್ಷೆ ಜಯಂತಿ, ಕೆಡಿಎ ಅಧ್ಯಕ್ಷ ಜಯಪಾಲ್‌, ನಗರಸಭೆ ಸದಸ್ಯರಾದ ಮಾಣಿಕ್ಯಂ, ಸುರೇಶ್‌, ಲಾರೆನ್ಸ್‌, ಕೆ.ಸಿ.ಮುರಳಿ, ಸೆಲ್ವಕುಮಾರ್‌, ಮುಖಂಡ ಜರ್ಮನ್‌  ಹಾಜರಿದ್ದರು.

ಮಾಜಿ ಶಾಸಕರು, ಜಿ.ಪಂ ಸದಸ್ಯೆ ನೃತ್ಯ
ಪ್ರಸನ್ನ ಲಕ್ಷ್ಮಿ ವೆಂಕಟರಮಣ ಸ್ವಾಮಿ ಜಾತ್ರೆಯಲ್ಲಿ ನಡೆದ ಆರ್ಕೆಸ್ಟ್ರಾದಲ್ಲಿ ಇಬ್ಬರು ಮಾಜಿ ಶಾಸಕರು ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯೆ ವೇದಿಕೆ ಮೇಲೆ ನೃತ್ಯ ಮಾಡಿದ್ದು ಕುತೂಹಲ ಮೂಡಿಸಿದೆ.

ಉತ್ಸವದಲ್ಲಿ ಮಾಜಿ ಶಾಸಕ ವೈ.ಸಂಪಂಗಿ ತಮಿಳು ಹಾಡಿಗೆ ಹೆಜ್ಜೆ ಹಾಕಿದರು. ನಂತರ ಅವರ ಪುತ್ರಿ ಹಾಗೂ ಪಾರಾಂಡಹಳ್ಳಿ ಜಿ. ಪಂ ಸದಸ್ಯೆ ಅಶ್ವಿನಿ ಹೆಜ್ಜೆ ಹಾಕಿದರು. ನಂತರ ಮರುದಿನ ಭಾನುವಾರ ನಡೆದ ಮತ್ತೊಂದು ಉತ್ಸವದ ಆರ್ಕೆಸ್ಟ್ರಾದಲ್ಲಿ ಮತ್ತೊಬ್ಬ ಮಾಜಿ ಶಾಸಕ ಎಸ್.ರಾಜೇಂದ್ರನ್‌ ಕುಣಿದರು. ಈ ಎರಡು  ನೃತ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT