ADVERTISEMENT

ವೈಜ್ಞಾನಿಕ ಪದ್ಧತಿಯಲ್ಲಿ ಮಾವಿನ ಕೊಯಿಲು ಮಾಡಬೇಕು

ತಾಲ್ಲೂಕು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಸಲಹೆ

​ಪ್ರಜಾವಾಣಿ ವಾರ್ತೆ
Published 22 ಮೇ 2018, 12:22 IST
Last Updated 22 ಮೇ 2018, 12:22 IST

ಶ್ರೀನಿವಾಸಪುರ: ಮಾವು ಬೆಳೆಗಾರರು ತಾವು ಬೆಳೆದ ಮಾವಿನ ಕಾಯಿಯನ್ನು ವೈಜ್ಞಾನಿಕ ಹಂತ ಹಂತವಾಗಿ ಕೊಯ್ಲು ಮಾಡಬೇಕು. ಉತ್ತಮ ಗುಣಮಟ್ಟದ ಹಣ್ಣನ್ನು ಮಾರುಕಟ್ಟೆಗೆ ಕಳುಹಿಸಬೇಕು ಎಂದು ತಾಲ್ಲೂಕು ಮಾವು ಬೆಳೆಗಾರರ ಸಂಘದ ಅಧ್ಯಕ್ಷ ಚಿನ್ನಪ್ಪರೆಡ್ಡಿ ಹೇಳಿದರು.

ತಾಲ್ಲೂಕಿನ ಹೊಗಳಗೆರೆ ಗ್ರಾಮದ ಮಾವು ಅಭಿವೃದ್ಧಿ ಕೇಂದ್ರದಲ್ಲಿ ರಾಜ್ಯ ಮಾವು ಅಭಿವೃದ್ಧಿ ಹಾಗೂ ಮಾರುಕಟ್ಟೆ ನಿಗಮದ ವತಿಯಿಂದ ಸೋಮವಾರ ಮಾವು ಬೆಳೆಗಾರರಿಗೆ ಏರ್ಪಡಿಸಿದ್ದ ಮಾವು ಕೊಯ್ಲೋತ್ತರ ತಂತ್ರಜ್ಞಾನ ಹಾಗೂ ಹಣ್ಣು ಮಾಡುವ ಬಗ್ಗೆ ತರಬೇತಿ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ರೈತರು ಅವೈಜ್ಞಾನಿಕವಾಗಿ ಮಾವು ಕೊಯ್ಲು ಮಾಡುವುದರಿಂದ ಕಾಯಿ ಕೊಳೆತು ಆರ್ಥಿಕ ನಷ್ಟ ಅನುಭವಿಸುತ್ತಾರೆ ಎಂದರು.

ತೋಟಗಾರಿಕಾ ಸಹಾಯಕ ನಿರ್ದೇಶಕ ಮಂಜುನಾಥ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಾವು ತಾಲ್ಲೂಕಿನ ಜನರ ಜೀವನಾಡಿಯಾಗಿದೆ. ಮಾವಿನ ಕೊಯ್ಲು ಅತ್ಯಂತ ಮುಖ್ಯವಾದ ಘಟ್ಟ. ಇಲ್ಲಿ ಎಡವಿದರೆ ನಷ್ಟ ಕಟ್ಟಿಟ್ಟ ಬುತ್ತಿ. ರೈತರು ಒಂದೇ ಸಲ ಮಾವಿನ ಕಾಯಿ ಕೊಯ್ಲು ಮಾಡುವುದನ್ನು ಬಿಡಬೇಕು. ಕಾಯಿ ಬಲಿತಂತೆ ಹಲವು ಹಂತಗಲ್ಲಿ ಕೊಯ್ಲು ಮಾಡಬೇಕು ಎಂದು ತಿಳಿಸಿದರು.

ADVERTISEMENT

ತೋಟಗಾರಿಕಾ ವಿಜ್ಞಾನಿ ಡಾ.ಕೃಷ್ಣಾ ಮಾತನಾಡಿ, ಮಾವನ್ನು ಕೊಯ್ಲು ಮಾಡುವಾಗ ಯಾವುದೇ ಕಾರಣಕ್ಕೂ ಕೋಲಿನಿಂದ ಹೊಡೆಯಬಾರದು, ರೆಂಬೆ ಹಿಡಿದು ಉದುರಿಸಬಾರದು. ಕಾಯಿ ನೆಲಕ್ಕೆ ಬೀಳದಂತೆ ನೊಡಿಕೊಳ್ಳಬೇಕು. ಕ್ರೇಟ್‌ನಲ್ಲಿ ಕಾಯಿ ತುಂಬಿ ಮಾರುಕಟ್ಟೆಗೆ ಸಾಗಿಸಿದಲ್ಲಿ, ಕಾಯಿಗೆ ಪೆಟ್ಟಾಗುವುದಿಲ್ಲ. ಹಾಗಾಗಿ ಉತ್ತಮ ಬೆಲೆ ಸಿಗುತ್ತದೆ ಎಂದು ಹೇಳಿದರು.

ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್‌ ಮಾತನಾಡಿ, ಮೇ 25ರಂದು ಬೆಂಗಳೂರಿನ ಲಾಲ್‌ ಬಾಗ್‌ನಲ್ಲಿ ಮಾವು ಮೇಳ ಏರ್ಪಡಿಸಲಾಗಿದೆ. ಮೇಳದಲ್ಲಿ ಭಾಗವಹಿಸುವ ಮಾವು ಬೆಳೆಗಾರರು ಉತ್ತಮ ಗುಣಮಟ್ಟದ ಕಾಯಿ ಮಾತ್ರ ಕೊಂಡೊಯ್ಯಬೇಕು. ಆಕರ್ಷಕ ಪ್ಯಾಕಿಂಗ್‌ ಮೂಲಕ ಗ್ರಾಹಕರನ್ನು ಸೆಳೆಯಬೇಕು ಎಂದು ಅವರು ಹೇಳಿದರು. ತೋಟಗಾರಿಕಾ ಸಹಾಯಕ ನಿರ್ದೇಶಕರಾದ ಎ.ಬೈರಾರೆಡ್ಡಿ, ನವೀನ್‌, ಪ್ರಸಾದ್‌, ರೈತ ಮುಖಂಡರಾದ ಚಂದ್ರಾರೆಡ್ಡಿ, ಚಂಗಪ್ಪ, ರಾಮಕೃಷ್ಣಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.