ಮುನಿರಾಬಾದ್: ಸಮಾಜದಲ್ಲಿ ದೈನಂದಿನ ಬದುಕಿನ ಜತೆ ಕಲೆ, ಸಂಸ್ಕೃತಿ ಮಿಳಿತಗೊಂಡಿದ್ದು, ಅದೇ ಸಮಾಜದ ಜೀವಾಳ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಭಿಪ್ರಾಯಪಟ್ಟರು.
ಈಚೆಗೆ ಹುಲಿಗಿಯಲ್ಲಿ ನಡೆದ ‘ಶೃತಿ ಸಂಗೀತ ಮತ್ತು ಸಾಂಸ್ಕೃತಿಕ ಕಲಾಸಂಘದ ಉದ್ಘಾಟನೆ ಮತ್ತು ಸಂಗೀತ ಹಾಗೂ ಸಾಂಸ್ಕೃತಿಕ ಕಲಾ ಉತ್ಸವ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು. ‘ಪಾರಂಪರಿಕ ಸಾಂಸ್ಕೃತಿಕ ಕಲೆಗಳು ಜನಮಾನಸದಿಂದ ಮರೆಯಾಗ ಬಾರದು. ಅವುಗಳನ್ನು ಉಳಿಸಬೇಕು’ ಎಂದು ಹೇಳಿದರು.
ವಾಲ್ಮೀಕಿ ನಾಯಕ ಸಮಾಜದ ಜಿಲ್ಲಾ ಘಟಕದ ಅಧ್ಯಕ್ಷ ಟಿ.ರತ್ನಾಕರ ಮಾತನಾಡಿ, ‘ಹಾಡು, ನೃತ್ಯದಂತಹ ಸಾಂಸ್ಕೃತಿಕ ಕಲೆಗಳು ಬದುಕಿನ ಅವಿಭಾಜ್ಯ ಅಂಗ. ಕಲೆ, ಸಂಸ್ಕೃತಿ ರಕ್ಷಣೆ ಎಲ್ಲರ ಜವಾಬ್ದಾರಿ’ ಎಂದರು.
ಹ್ಯಾಟಿ ಹನುಮಂತಪ್ಪ ನಾಯಕ್ ಮಾತನಾಡಿ, ‘ಗ್ರಾಮೀಣ ಭಾಗದಲ್ಲಿ ಹಾಸುಹೊಕ್ಕಾಗಿರುವ ಜನಪದ ಕಲೆ, ಭರತನಾಟ್ಯ, ಗೀಗಿಪದ, ಸುಗಮಸಂಗೀತ, ಹಿಂದೂಸ್ತಾನಿ ಸಂಗೀತ ಪ್ರತಿಭೆಗಳನ್ನು ಬೆಳಕಿಗೆ ತರುವ ಉದ್ದೇಶದಿಂದ ವೇದಿಕೆಯನ್ನು ಒದಗಿಸಲು ಕಲಾಸಂಘ ಅಸ್ತಿತ್ವಕ್ಕೆ ತರಲಾಗಿದೆ’ ಎಂದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಉಪನ್ಯಾಸಕರಾದ ವಿರೂಪಾಕ್ಷಪ್ಪ ಇಟಗಿ, ತಿಮ್ಮಣ್ಣ ಭೀಮರಾಯ, ಕಲಾವಿದರಾದ ಶೃತಿ ಹ್ಯಾಟಿ, ಹನುಮಂತಪ್ಪ ನರೇಗಲ್ ಕೊಪ್ಪಳ, ಸುಗಮಸಂಗೀತ ಕಲಾವಿದ ವಿನೋದಕುಮಾರ್, ಗ್ಯಾನಪ್ಪ ತಳವಾರ ಸೇಬಿನಕಟ್ಟೆ, ಮಿಮಿಕ್ರಿ ಕಲಾವಿದ ಮಹಾಂತೇಶ್ ಹಡಪದ, ಹಾಸ್ಯಕಲಾವಿದ ಮಂಜುನಾಥ ಆಗೋಲಿ, ಮಹೇಶ್ವರಿ ನಿರಂಜ್, ಚಿತ್ರಕಲಾವಿಭಾಗದ ಈರಪ್ಪಚೂರಿ, ಜ್ಯೋತಿ ಕಾತರಕಿ, ಮಂಜುನಾಥ ಹ್ಯಾಟಿ ಕಲಾವಿದರು ವಿವಿಧ ಪ್ರಕಾರದ ಸಂಗೀತ ಕಾರ್ಯಕ್ರಮ ನೀಡಿದರು. ಗಣ್ಯರಾದ ಹನುಮಂತಪ್ಪನಾಯಕ್, ರಂಗಕಲಾವಿದ ಕೊಟ್ರಯ್ಯಸ್ವಾಮಿ, ರಾಮಣ್ಣ ಕಲ್ಲನ್ನವರ್, ಜಿಯಾಸಾಬ್, ವೆಂಕಟೇಶ್, ಶಂಕ್ರಪ್ಪ, ಜಂಬಣ್ಣಜಂತಕಲ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.