ADVERTISEMENT

ಕ್ರೀಡೆಗೂ ಆದ್ಯತೆ ನೀಡಿ: ಸಂಸದ ಸಲಹೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2014, 10:27 IST
Last Updated 1 ಅಕ್ಟೋಬರ್ 2014, 10:27 IST

ಕೊಪ್ಪಳ: ಮಾನವನ ಜೀವನದಲ್ಲಿ ಕ್ರೀಡೆ ಅವಿಭಾಜ್ಯ ಅಂಗ ಎಂದು ಸಂಸದ ಸಂಗಣ್ಣ ಕರಡಿ ಹೇಳಿದರು. ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಆಶ್ರಯ­ದಲ್ಲಿ ತಾಲ್ಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಂಗಳವಾರ ಮಾತನಾಡಿದರು.

ಪಠ್ಯದ ಜತೆ ಪಠ್ಯೇತರ ಚಟುವ­ಟಿಕೆಗಳಿಗೂ ಒತ್ತು ನೀಡಬೇಕು. ಹೀಗಾದಾಗ ಕ್ರೀಡಾ ಕ್ಷೇತ್ರದ ಅಂಶ­ಗಳನ್ನೂ ಮಕ್ಕಳಿಗೆ ಬೋಧಿಸಬಹುದು. ಕ್ರೀಡೆಗೆ ಜಾತಿ ಮತ, ಬೇಧ ಮರೆತು ಏಕತೆ ಸಾಧಿಸಲು ಸಾಧ್ಯವಿದೆ. ಸವಾಲು ಎದುರಿಸುವ ಮಾನಸಿಕ ಸ್ಥೈರ್ಯವನ್ನೂ ಬೆಳೆಸಿಕೊಳ್ಳ­ಬಹುದು. ವ್ಯಕ್ತಿತ್ವ ವಿಕಸನಕ್ಕೂ ಅವಕಾಶವಿದೆ. ಇಲ್ಲಿನ ಶಿಕ್ಷಕರು ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡುವಂತಾಗಲಿ ಎಂದು ಆಶಿಸಿದರು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ, ದೈಹಿಕ ಶಿಕ್ಷಕರೂ ಕ್ರೀಡೆಯಲ್ಲಿ ಪಳಗಬೇಕು. ವಿದೇಶಗಳಲ್ಲಿ ಕ್ರೀಡೆಗೆ ಸಾಕಷ್ಟು ಪ್ರಾಮುಖ್ಯತೆ ನೀಡಲಾಗುತ್ತದೆ. ನಮ್ಮ ಸರ್ಕಾರಗಳು ನೀಡಿದರೂ ಕ್ರೀಡೆಯಲ್ಲಿ ಗಣನೀಯ ಸಾಧನೆ ಮಾಡಿದವರ ಸಂಖ್ಯೆ ಕಡಿಮೆಯಿದೆ ಎಂದರು.

ಶಿಕ್ಷಕರಿಗೆ ಕ್ರೀಡಾ ಕ್ಷೇತ್ರದಲ್ಲಿ ತೊಡಗಿಕೊಳ್ಳಲು ಬೇಕಾದ ನೆರವು ಕಲ್ಪಿಸಿಕೊಡಲು ಸರ್ಕಾರದ ಗಮನಸೆಳೆಯುವುದಾಗಿ ಅವರು ಹೇಳಿದರು. ಮಂಜುನಾಥ ಪಾಟೀಲ್‌, ಶಂಭು­ಲಿಂಗನಗೌಡ, ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್‌ ಪೂಜಾರ್‌, ಸಿದ್ಧಪ್ಪ ಕುರಿ, ಧನಂಜಯ ಮಾಲಗಿತ್ತಿ, ಮುತ್ತುರಾಜ ಕುಷ್ಟಗಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.