ಹನುಮಸಾಗರ: ಪ್ರತಿ ವರ್ಷ ಹಿಂಗಾರು ಹಂಗಾಮಿನಲ್ಲಿ ಕಡಲೆ ಬೀಜ ಪಡೆಯುವುದಕ್ಕೆ ರೈತರು ಹೋರಾಟವನ್ನೇ ಮಾಡಬೇಕಾಗಿತ್ತು. ಕೆಲ ಬಾರಿ ಪೊಲೀಸರು ಲಾಠಿ ಚಾರ್ಜ್ ಮಾಡಿದ ಉದಾಹರಣೆಗಳೂ ಇವೆ. ಆದರೆ, ಈ ಬಾರಿ ಕಡಲೆ ಬೀಜ ಕೇಳುವವರೇ ಇಲ್ಲ.
ಹಾಗಂತ ಕಡಲೆ ಬಿತ್ತನೆಯಾಗಿಲ್ಲ ಎನ್ನುವಂತಿಲ್ಲ. ಈ ಬಾರಿ ಹಿಂಗಾರು ಹಂಗಾಮಿಗೆ ಉತ್ತಮ ಮಳೆ ಸುರಿದ ಕಾರಣ ಬಹುತೇಕ ಪ್ರದೇಶದಲ್ಲಿ ಕಡಲೆ ಬಿತ್ತನೆಯಾಗಿದೆ. ಆದರೆ, ಮಾರುಕಟ್ಟೆಯ ದರಕ್ಕಿಂತ ರೈತ ಸಂಪರ್ಕ ಕೇಂದ್ರದಲ್ಲಿ ಬೆಲೆ ಹೆಚ್ಚು ಇದ್ದ ಕಾರಣ ಕಡಲೆ ಬಿತ್ತನೆ ಮಾಡುವ ರೈತರು ಈ ಬಾರಿ ರೈತ ಸಂಪರ್ಕ ಕೇಂದ್ರದತ್ತ ಮುಖ ಮಾಡಿಲ್ಲ ಎನ್ನಲಾಗುತ್ತಿದೆ.
‘ಪ್ರತಿ ವರ್ಷ ಕಡಲೆ ಬೀಜಕ್ಕೆ ಅಧಿಕ ಬೇಡಿಕೆ ಇರುವುದರಿಂದಾಗಿ ಈ ಬಾರಿ ಹೆಚ್ಚುವರಿಯಾಗಿ ಬೀಜ ತರಿಸಲಾಗಿದೆ. ಆದರೆ ರೈತರು ಖರೀದಿ ಮಾಡುತ್ತಿಲ್ಲ. ಹಿಂದಿನ ವರ್ಷ ಕಡಲೆ ಬೆಳೆದ ರೈತರು ಬೀಜ ಸಂಗ್ರಹಿಸಿಕೊಂಡಿದ್ದಾರೆ. ಅಲ್ಲದೆ ಈ ಬಾರಿ ಬಿತ್ತನೆ ಸಮಯದಲ್ಲಿ ಉತ್ತಮ ಮಳೆಯಾಗಿದ್ದು, ಕೆರೆ, ಕೊಳವೆ ಬಾವಿಗಳಿಗೆ ನೀರು ಬಂದಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಡಲೆಗಿಂತ ಶೇಂಗಾ ಬಿತ್ತನೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣ’ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅರಣುಕುಮಾರ ಹೇಳುತ್ತಾರೆ.
‘ಒಟ್ಟು 34 ಟನ್ ಗುಣಮಟ್ಟದ ಕಡಲೆ ಬೀಜ ತರಿಸಲಾಗಿತ್ತು. ಅದರಲ್ಲಿ 17 ಟನ್ ಮಾತ್ರ ಖರ್ಚಾಗಿದೆ. 20 ಟನ್ ಶೇಂಗಾ ಬೀಜದಲ್ಲಿ 9 ಟನ್ ಉಳಿದಿದೆ. ಬೀಜಕ್ಕೆ ಯಾವುದೇ ಕೊರತೆ ಇಲ್ಲ’ ಎಂದು ಅಧಿಕಾರಿಗಳು ತಿಳಿಸಿದರು.
‘ಸಹಾಯ ಧನದಲ್ಲಿ ನೀಡುವ ಬೀಜಗಳು ಮಾರುಕಟ್ಟೆಯ ದರಕ್ಕಿಂತ ಕಡಿಮೆ ಇದ್ದರೆ ರೈತರಿಗೆ ಅನುಕೂಲವಾಗುತ್ತದೆ. ರೈತ ಸಂಪರ್ಕ ಕೇಂದ್ರದಲ್ಲಿ 20 ಕೆ.ಜಿ. ಕಡಲೆ ಬೀಜಕ್ಕೆ ₹1,160 ಇದ್ದರೆ ಮಾರುಕಟ್ಟೆಯಲ್ಲಿ ₹1,050 ಆಸುಪಾಸಿದೆ. ಹೀಗಿರುವಾಗ ನಾವೇಕೆ ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ಖರೀದಿಸಬೇಕು’ ಎಂದು ಅಡವಿಭಾವಿಯ ರೈತ ಮಲ್ಲಿಕಾರ್ಜುನ ದೋಟಿಹಾಳ ಹೇಳುತ್ತಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.