ADVERTISEMENT

‘ಜಾತಿ ಮಧ್ಯೆ ವಿಷಬೀಜ ಬಿತ್ತುವುದೇ ಬಿಜೆಪಿ ಸಾಧನೆ’

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2017, 8:49 IST
Last Updated 9 ನವೆಂಬರ್ 2017, 8:49 IST
ಕೊಪ್ಪಳದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಕರ್ನಾಟಕ ಮೀನುಗಾರರ ನಿಗಮದ ಅಧ್ಯಕ್ಷ ಯು.ಆರ್‌.ಸಭಾಪತಿ ಮಾತನಾಡಿದರು
ಕೊಪ್ಪಳದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಕರ್ನಾಟಕ ಮೀನುಗಾರರ ನಿಗಮದ ಅಧ್ಯಕ್ಷ ಯು.ಆರ್‌.ಸಭಾಪತಿ ಮಾತನಾಡಿದರು   

ಕೊಪ್ಪಳ: ‘ಜಾತಿ–ಜಾತಿ ಮಧ್ಯೆ ವಿಷಬೀಜ ಬಿಜೆಪಿ ಸಾಧನೆ’ ಎಂದು ಕರ್ನಾಟಕ ಮೀನುಗಾರರ ನಿಗಮದ ಅಧ್ಯಕ್ಷ ಯು.ಆರ್‌. ಸಭಾಪತಿ ಹೇಳಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಕಾರ್ಯಾಲಯದಲ್ಲಿ ಬುಧವಾರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ದಕ್ಷಿಣ ಭಾರತದ ಮೊದಲ ಬಿಜೆಪಿ ಸರ್ಕಾರ ಎಂದು ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿದ ಬಿಜೆಪಿ ನಾಯಕರು ಭ್ರಷ್ಟಾಚಾರದಲ್ಲಿ ಮುಳುಗಿ ಜೈಲು ಸೇರಿದ ಮುಖ್ಯಮಂತ್ರಿಯ ಉದಾಹರಣೆ ಈ ದೇಶದಲ್ಲಿ ಎಲ್ಲಿ ಕಂಡುಬರುವುದಿಲ್ಲ. ಭ್ರಷ್ಟಾಚಾರಿಗಳೇ ಭ್ರಷ್ಟಚಾರದ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ.

ಕಪ್ಪುಹಣವನ್ನು 100 ದಿನದಲ್ಲಿ ದೇಶಕ್ಕೆ ಮರಳಿ ತಂದು ಕಾಂಗ್ರೆಸ್‌ ನಾಯಕರನ್ನು ಜೈಲು ಸೇರಿಸುತ್ತೇನೆ ಎಂದು ಹೇಳಿದ ಪ್ರಧಾನಿಯವರು ಈವರೆಗೆ ಎಷ್ಟು ಕಪ್ಪುಹಣದ ಧನಿಕರನ್ನು ಜೈಲಿಗೆ ಕಳಿಸಿದ್ದಾರೆ? ನೋಟ್ ಅಮಾನ್ಯದಿಂದ ಸರ್ಕಾರಕ್ಕೆ ಎಷ್ಟು ಕಪ್ಪುಹಣ ವಾಪಸ್ಸಾಗಿದೆ ಎಂದು ಲೆಕ್ಕ ಕೊಡಲಿ.

ADVERTISEMENT

ಕೇವಲ ಸುಳ್ಳು ಮಾತುಗಳಿಂದ ಅಚ್ಚೆ ದಿನ ಸೃಷ್ಟಿ ಆಗುವುದಿಲ್ಲ. ದೇಶದ ಯುವಕರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ ನೋಟ್‌ ಅಮಾನ್ಯೀಕರಣದ ಲಾಭವೇನು? ದೇಶದ ಅರ್ಥವ್ಯವಸ್ಥೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ್ದೆ ಕೇಂದ್ರ ಬಿಜೆಪಿ ಸರ್ಕಾರದ ಸಾಧನೆಯಾಗಿದೆ. ಆರ್‌ಎಸ್ಎಸ್ ಸಂಘಟನೆಯ ಕೈಗೊಂಬೆಯಾಗಿರುವ ಪ್ರಧಾನಿಯವರು ದೇಶದ ಎಲ್ಲ ವರ್ಗಗಳ ಜನರ ಹಿತ ಕಾಪಾಡುವಲ್ಲಿ ವಿಫಲ ಆಗಿದ್ದಾರೆ’ ಎಂದು ದೂರಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಕೆ.ಬಸವರಾಜ ಹಿಟ್ನಾಳ, ನಿಗಮ ಉಪಾಧ್ಯಕ್ಷ ಡಾ.ಚೌದ್ರಿ, ಬ್ಲಾಕ್ ಕಾಂಗ್ರೆಸ್‌ ಅಧ್ಯಕ್ಷ ಸುರೇಶ ಭೂಮರೆಡ್ಡಿ, ಮುಖಂಡರಾದ ದ್ಯಾಮಣ್ಣ ಚಿಲವಾಡಗಿ, ವಿಶ್ವನಾಥ ರಾಜು, ಇಂದಿರಾ ಭಾವಿಕಟ್ಟಿ, ಜಡಿಯಪ್ಪ ಬಂಗಾಳಿ, ಬಾಳಪ್ಪ ಬಾರಕೇರ, ಶರಣಪ್ಪ ಮುಸ್ಟೂರ, ವಕ್ತಾರ ಅಕ್ಬರ್‌ಪಾಷಾ ಪಲ್ಟನ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.