ADVERTISEMENT

ತೆರೆದ ಬಸವಣ್ಣ ಜಾತ್ರಾ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2015, 11:25 IST
Last Updated 5 ಸೆಪ್ಟೆಂಬರ್ 2015, 11:25 IST

ಹನುಮಸಾಗರ: ‘ತೆರೆದ ಬಸವಣ್ಣ ದೇವರ ಜಾತ್ರಾ ಮಹೋತ್ಸವ’ದ ಶುಕ್ರವಾರ ಕಳಸಾರೋಹಣದ ನಿಮಿತ್ತ ಭವ್ಯ ಮೆರವಣಿಗೆಯೊಂದಿಗೆ ಕಳಸ ಕೊಂಡೊಯ್ಯಲಾಯಿತು.

ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಪೂರೈಸಿದ ಬಳಿಕ ಕರಿಸಿದ್ದಪ್ಪ ಮುಳುಗುಂದ ಅವರ ಮನೆಯಿಂದ ಆರಂಭವಾದ ಮೆರವಣಿಗೆ ಕರಿಸಿದ್ದೇಶ್ವರ ಮಠದ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.

ಅಲಂಕೃತಗೊಳಿಸಲಾಗಿದ್ದ ಚಕ್ಕಡಿಯಲ್ಲಿ ಕಳಸ ಇಡಲಾಗಿತ್ತು. ನೂರಾರು ಸುಮಂಗಲೆಯರು ಕಳಸ ಹಿಡಿದು ಸಾಗಿದರು. ಬಾಜಾ ಭಜಂತ್ರಿ, ಕರಿಸಿದ್ದೇಶ್ವರ ಭಜನಾ ಮಂಡಳಿಯ ಸದಸ್ಯರು ಪಾಲ್ಗೊಂಡಿದ್ದರು. ಮೆರೆವಣಿಗೆಯಲ್ಲಿ ಅಲಂಕಾರಗೊಳಿಸಿದ್ದ ಎತ್ತು ಭಜನೆಯ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದು ಮೆರವಣಿಗೆಯ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಿತ್ತು.

‘ಹಲವಾರು ವರ್ಷಗಳಿಂದ ನಾವೂ ಈ ಜಾತ್ರೆಯನ್ನು ನಡೆಸಿಕೊಂಡು ಬರುತ್ತಿದ್ದೇವೆ, ಈ ಬಸವಣ್ಣನ ಮೇಲೆ ರೈತರಿಗೆ ಅಪಾರವಾದ ಭಕ್ತಿ ಇದೆ, ಈ ಕಾರಣವಾಗಿಯೇ ಬರಗಾಲವಾದರೂ ಪ್ರತಿ ವರ್ಷದಂತೆ ಈ ವರ್ಷವೂ ಆಚರಿಸುತ್ತಿದ್ದೇವೆ, ಸೆ.6 ರಂದು ನಡೆಯುವ ಜಾತ್ರಾಮಹೋತ್ಸವದಲ್ಲಿ ಸಾಮೂಹಿಕ ವಿವಾಹ, ದಾಸೋಹ, ರುದ್ರಾಭಿಷೇಕದಂತಹ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ’ ಎಂದು ಮುಖಂಡ ಈರಣ್ಣ
ಹುನುಗುಂಡಿ ಹೇಳಿದರು.

ಕಳಸಾರೋಹಣದ ಬಳಿಕ ಮಹಾಮಂಗಳಾರತಿ, ನೈವೇದ್ಯ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ನಡೆಯಿತು. ಪ್ರಮುಖರಾದ ಬಸವರಾಜ ಬಾಚಲಾಪೂರ, ರುದ್ರಪ್ಪ ಹಳ್ಳಿಗುಡಿ, ಬಾಬುಮೀಯಾ ಚೌದರಿ, ಶರಣಪ್ಪ ಹಕ್ಕಿ, ಅಡಿವೆಪ್ಪ ಹಳ್ಳಿಗುಡಿ, ಶರಣಪ್ಪ ಇಟಗಿ, ಅರ್ಜುನಪ್ಪ ಇಟಗಿ, ರುದ್ರಪ್ಪ ಬಾಚಲಾಪೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.