ಕೊಪ್ಪಳ: ದಲಿತರ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಆಶ್ರಯದಲ್ಲಿ ಮಂಗಳವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ ನಡೆಯಿತು.
ಅಖಿಲಭಾರತ ದಲಿತರ ಹಕ್ಕುಗಳ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಧರಣಿಯಲ್ಲಿ ಜಾತಿ ತಾರತಮ್ಯ ಮತ್ತು ದೌರ್ಜನ್ಯವನ್ನು ಖಂಡಿಸಲಾಯಿತು.
ಹೈದರಾಬಾದ್ ವಿಶ್ವವಿದ್ಯಾಲಯ ದಲ್ಲಿ ದಲಿತ ವಿದ್ಯಾರ್ಥಿ ರೋಹಿತ್ ವೇಮುಲ ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು.
2015ರ ಜುಲೈ 10ರಂದು ಸಾವಿಗೀಡಾದ ಗಂಗಾವತಿ ತಾಲ್ಲೂಕು ಮರಕುಂಬಿಯ ವೀರೇಶ್ ಕುಟುಂಬಕ್ಕೆ ₹ 10 ಲಕ್ಷ ಪರಿಹಾರ ನೀಡಬೇಕು. ಮರಕುಂಬಿಯ ದಲಿತರ ವಿರುದ್ಧ ದಾಖಲಾದ ಪ್ರತಿದೂರುಗಳನ್ನು ರದ್ದು ಮಾಡಬೇಕು. ದಲಿತರಿಗೆ ಎಲ್ಲ ಮನೆ, ದೇವಸ್ಥಾನ, ಕ್ಷೌರದಂಗಡಿಗಳಲ್ಲಿ ಪ್ರವೇಶಕ್ಕೆ ಅವಕಾಶ ಕಲ್ಪಿಸಬೇಕು.
ದೇವದಾಸಿ ಪದ್ಧತಿ ತೊರೆದ ಮಹಿಳೆಯರಿಗೆ ಕೃಷಿ ಭೂಮಿ ಮತ್ತು ₹ 2 ಸಾವಿರ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಮುಖಂಡರಾದ ಎಂ.ಬಸವರಾಜ ಮುರಕುಂಬಿ, ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ನಿತ್ಯಾನಂದ ಸ್ವಾಮಿ, ಉಪಾಧ್ಯಕ್ಷ ಎಚ್.ಗಂಗಾಧರಯ್ಯ, ಕಾರ್ಯದರ್ಶಿ ಕೆ.ಹುಸೇನಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.