ಗಂಗಾವತಿ: ತಾಲ್ಲೂಕಿನ ಹೊಸಳ್ಳಿ ಗ್ರಾಮದ ವೃತ್ತದಲ್ಲಿ ನಾಮಫಲಕ ಅಳವಡಿಸುವ ಸಂಬಂಧ ಗುರುವಾರ ಎರಡು ಗುಂಪುಗಳ ಮತ್ತೆ ವಿವಾದ ಉಂಟಾಗಿದೆ.ಗ್ರಾಮದಲ್ಲಿ ಅಂಬಿಗರ ಚೌಡಯ್ಯ ಹಾಗೂ ಕನಕದಾಸರ ನಾಮಫಲಕ ಅಳವಡಿಸುವ ಸಂಬಂಧ ಗಂಗಾಮತ ಹಾಗೂ ಹಾಲುಮತ ಸಮಾಜದ ಮಧ್ಯೆ ಭಿನ್ನಾಭಿಪ್ರಾಯವಿತ್ತು. ಇದು ಹಲವು ಬಾರಿ ವಿಕೋಪಕ್ಕೆ ಹೋಗಿತ್ತು.
ಉಬಯ ಕೋಮಿನ ಮುಖಂಡರೊಂದಿಗೆ ಸಂಧಾನ ಮಾಡಲು ಅಧಿಕಾರಿಗಳು ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ. ಜಿಲ್ಲಾಧಿಕಾರಿ ಆದೇಶದ ಮೇರೆಗೆ ಗುರುವಾರ ನಾಮಫಲಕ ತೆರವು ಮಾಡಲು ತಹಶೀಲ್ದಾರ್ ಚಂದ್ರಕಾಂತ್ ಮುಂದಾಗಿದ್ದರು.ಎರಡು ಗುಂಪಿನ ಜನ ಸ್ಥಳದಲ್ಲಿ ಜಮಾಯಿಸಿದ್ದರು. ಗಂಗಾವತಿ ಡಿವೈಎಸ್ಪಿ ಎಸ್.ಎಂ.ಸಂಧಿಗವಾಡ ಅವರು, ಮುಂಜಾಗ್ರತೆಯಾಗಿ 150ಕ್ಕೂ ಹೆಚ್ಚು ಪೊಲೀಸರನ್ನು ಸ್ಥಳದಲ್ಲಿ ನಿಯೋಜಿಸಿದ್ದರು.
ಬಳಿಕ ಉಬಯ ಜಾತಿ ಮುಖಂಡರ ಸಭೆ ನಡೆಸಿದ ತಹಶೀಲ್ದಾರ್ ಚಂದ್ರಕಾಂತ್, ನಾಮಫಲಕ ಅಳವಡಿಸಲು ಎರಡು ಪ್ರತ್ಯೇಕ ಸ್ಥಳ ನಿಗದಿ ಮಾಡಿದರು. ಆದರೆ ಇದಕ್ಕೂ ಸಭೆಯಲ್ಲಿ ಸಹಮತ ಮೂಡಲಿಲ್ಲ. ಯಾವುದೇ ನಿರ್ಧಾರ ಕೈಗೊಳ್ಳಲಾಗದೆ ಸಭೆ ಮುಂದೂಡಲಾಯಿತು.ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಟಿ.ವೆಂಕೋಬಪ್ಪ, ಮುಖಂಡರಾದ ಶ್ರೀನಿವಾಸ, ಸಿದ್ದಪ್ಪ, ಹನುಮೇಶ ಕುಂಟೋಜಿ, ಮರಿಯಪ್ಪ, ಅಯ್ಯಪ್ಪ, ಭೀಮಪ್ಪ ಹೊಸಮನಿ, ಮಾರ್ಕಂಡಯ್ಯ, ವಿರೂಪಾಕ್ಷಪ್ಪ ರೇಷ್ಮೆ, ಮೋರಿ ದುರುಗಪ್ಪ, ಯಂಕಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.