ಕಾರಟಗಿ (ಕೊಪ್ಪಳ ಜಿಲ್ಲೆ): ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹಣೆ ಕುಸಿದಿದೆ. ಕೊಪ್ಪಳ, ರಾಯಚೂರು, ಬಳ್ಳಾರಿ ಜಿಲ್ಲೆಗಳ ಜನ, ಜಾನುವಾರುಗಳಿಗೆ ಕುಡಿಯುವ ನೀರಿನ ಕೊರತೆಯಾಗಿದೆ. ನಾಟಿ ಮಾಡಿದ್ದ ಭತ್ತದ ಬೆಳೆ ಒಣಗಿದೆ. ಜಮೀನು ಬಿರುಕುಬಿಟ್ಟಿದೆ.
ಉಳೇನೂರ ಬಳಿ ನದಿ ಪಕ್ಕದ ಹೊಲಗಳು , ಭತ್ತದ ಗದ್ದೆಗಳಲ್ಲಿ ನೀರಿಲ್ಲದೆ ಬಿರುಕು ಕಾಣಿಸಿಕೊಂಡಿದೆ. ಭತ್ತದ ಬೆಳೆ ಕಮರಿ ಹೋಗಿದೆ. ಸ್ಥಳೀಯ ರೈತ ರಾಜಾಸಾಬ್ ಪ್ರತಿಕ್ರಿಯಿಸಿ, ‘ ನದಿ ಇಷ್ಟೊಂದು ಬತ್ತಿರುವುದನ್ನು ನೋಡಿರಲಿಲ್ಲ’ ಎಂದರು.
ವಿದ್ಯುತ್ ಉತ್ಪಾದನೆ ಸ್ಥಗಿತ: ಬೆನ್ನೂರು ಹಾಗೂ ಸೂಗೂರು ಬಳಿ ತುಂಗಭದ್ರಾ ನದಿಗೆ ಅಡ್ಡಲಾಗಿ ಸ್ಥಾಪಿಸಿರುವ ಭೋರುಕಾ ಕಿರುಜಲ ವಿದ್ಯುತ್ ಕೇಂದ್ರ ನೀರಿನ ಅಭಾವದಿಂದ ವಿದ್ಯುತ್ ಉತ್ಪಾದನೆ ಸ್ಥಗಿತಗೊಳಿಸಿವೆ.
ಒಣಗುತ್ತಿರುವ ಭತ್ತ: ನೀರಿನ ಅಭಾವದಿಂದ ಭತ್ತದ ಬೆಳೆ ಒಣಗುತ್ತಿದೆ, ಕೆಲವೆಡೆ ಸಂಪೂರ್ಣ ನಾಶವಾಗಿದೆ. ನಾಟಿ ಮಾಡಿದ ರೈತರು ಬೆಳೆ ರಕ್ಷಣೆಗಾಗಿ ವಿಫಲಯತ್ನ ನಡೆಸುತ್ತಿದ್ದಾರೆ.
ನೀರಿನ ಘಟಕ ಸ್ಥಗಿತ: ಬೆನ್ನೂರು ಹಾಗೂ ಜಮಾಪುರ ಬಳಿ ಇರುವ ಬಹುಗ್ರಾಮ ಕುಡಿಯುವ ಶುದ್ಧ ನೀರಿನ ಘಟಕಗಳು ನದಿಯಲ್ಲಿ ನೀರಿಲ್ಲದೆ ಸ್ಥಗಿತ ಆಗಿವೆ. ಜನರು ನೀರಿಗಾಗಿ ಅಲೆದಾಡುವ ದೃಶ್ಯ ಸಾಮಾನ್ಯವಾಗಿದೆ. ಬೇಸಿಗೆ ಆರಂಭದಲ್ಲೆ ಹೀಗಾದರೆ, ಮುಂದೆ ಹೇಗೆ ಎಂಬ ಆತಂಕ ಜನರನ್ನು ಕಾಡತೊಡಗಿದೆ.
ನದಿ ಪಾತ್ರದ ಉಳೆನೂರ ಕ್ಷೇತ್ರದ ಸದಸ್ಯ ಗವಿಸಿದ್ದಪ್ಪ ಪ್ರತಿಕ್ರಿಯಿಸಿ, ‘ನದಿ ಪಾತ್ರದ ಜನರು ಇದೀಗ ಸಂಕಷ್ಟ ಎದುರಿಸುತ್ತಿದ್ದಾರೆ.
ಕುಡಿಯುವ ನೀರು ಪೂರೈಸಲು ಕೊಳವೆಬಾವಿ ಕೊರೆಯಿಸಲಾಗುವುದು, ಅವಶ್ಯವಿರುವೆಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು’ ಎಂದರು.
‘ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುಂಜಾಗರೂಕ ಕ್ರಮ ಕೈಗೊಳ್ಳಲು ಜಿಲ್ಲಾಡಳಿತ ಮುಂದಾಗಬೇಕಿದೆ. ಜನಪ್ರತಿನಿಧಿಗಳು ಕೈಜೋಡಿಸಬೇಕು’ ಎನ್ನುತ್ತಾರೆ ಸಾರ್ವಜನಿಕರು.