ADVERTISEMENT

ಬಾಲಕಿ ಕೊಲೆ: ವಿವಿಧ ಸಂಘಟನೆಗಳ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2017, 7:29 IST
Last Updated 22 ಡಿಸೆಂಬರ್ 2017, 7:29 IST

ಗಂಗಾವತಿ: ವಿಜಯಪುರದಲ್ಲಿ ಬಾಲಕಿ ಮೇಲೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಆರೋಪಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ನಗರದಲ್ಲಿ ವಿವಿಧ ವಿದ್ಯಾರ್ಥಿ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಎಸ್ಎಫ್ಐ ಸಂಘಟನೆ ತಾಲ್ಲೂಕು ಘಟಕದ ನೇತೃತ್ವದಲ್ಲಿ ವಿವಿಧ ಶಾಲಾ– ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿನ ಶ್ರೀಕೃಷ್ಣ ದೇವರಾಯ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಒತ್ತಾಯಿಸಿದರು.

ಪ್ರಮುಖರಾದ ಅಮರೇಶ ಕಡಗದ, ಗ್ಯಾನೇಶ ಕಡಗದ, ಮರಿನಾಗ ಡಗ್ಗಿ, ಮಂಜುನಾಥ ಡಗ್ಗಿ, ಜಾಹೀನ್, ರಾಜಾಬಿ, ಸುಮಾ, ಅಶ್ವೀನಿ, ಸಿದ್ದಲಿಂಗಮ್ಮ, ಭೀಮಮ್ಮ, ಆಫ್ರಿನಾ, ಮುಷ್ಕಾನ್, ಸುಹಾನ, ತಾಯಮ್ಮ, ಯಾಸೀನ್, ಸುರೇಶ, ವೀರೇಶ, ಬಸವರಾಜ ಇದ್ದರು.

ADVERTISEMENT

ಅಂಬೇಡ್ಕರ್ ಸೇನೆಯಿಂದ ನಡೆದ ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಅಧ್ಯಕ್ಷ ಮಂಜುನಾಥ ಸಾಬಳೆ ಮಾತನಾಡಿ, ನಾಗರಿಕ ಸಮಾಜ ತಲೆತಗ್ಗಿಸುವ ರೀತಿಯಲ್ಲಿ ಕೃತ್ಯ ನಡೆದಿದ್ದು, ಆರೋಪಿಗಳಿಗೆ ಗಲ್ಲು ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದರು.

ಕಂದಾಯ ಇಲಾಖೆಯ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಮಹ್ಮದ್ ಪೀರು, ಆಮೀದ್, ಸಲ್ಮಾನ್ ಮಾಲೇಕೊಪ್ಪ, ವೆಂಕಟೇಶ ಚಲುವಾದಿ, ಆಸೀಫ್, ನವಾಜ್, ವಿಜಯ್, ರಿಂಕೇಶ ಮೋಟ, ಆಮೀತ್, ನವಾಜ್ ಇದ್ದರು.

ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಜಿಲ್ಲಾ ಘಟಕದ ಸಂಚಾಲಕ ಸೈಯದ್ ಸರ್ಫರಾಜ್ ಮಾತನಾಡಿ, ಆರೋಪಿಗಳ ಬಂಧನಕ್ಕೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಆರೋಪಿಗಳ ರಕ್ಷಣೆ: ವಿಜಯಪುರದಲ್ಲಿ ಬಾಲಕಿಯನ್ನು ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಆರೋಪಿಗಳನ್ನು ಗೃಹ ಇಲಾಖೆ ರಕ್ಷಿಸುತ್ತಿದೆ ಎಂದು ನಿರತವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಭಾಗ್ಯವತಿ ಭೋಲಾ ಆರೋಪಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ಇಬ್ಬರು ಪುತ್ರರು ಭಾಗಿಯಾಗಿದ್ದಾರೆ. ಆರೋಪಿಗಳ ಬಂಧನಕ್ಕೆ ಇಲಾಖೆ ಮುಂದಾಗಿಲ್ಲ. ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲ ಎಂಬುವುದು ಸಾಬೀತಾಗಿದೆ ಎಂದು ಆಪಾದಿಸಿದರು.

ಪರಿಶಿಷ್ಟ ಜಾತಿ, ವರ್ಗದ ಜನರ ಮೇಲೆ ದೌರ್ಜನ್ಯವಾದಾಗ ಸಮಾಜ ಕಲ್ಯಾಣ ಇಲಾಖೆಗೆ ₹8.25 ಲಕ್ಷ ಪರಿಹಾರ ನೀಡಲು ಅವಕಾಶವಿದೆ. ಇದು ತಾಲ್ಲೂಕು ಮಟ್ಟದ ಅಧಿಕಾರಿ ನೀಡಬಹುದಾದ ಪರಿಹಾರ. ಮುಖ್ಯಮಂತ್ರಿ ಬಾಲಕಿಯ ಮನೆಗೆ ಭೇಟಿ ನೀಡಿರುವುದು ಕೇವಲ ರಾಜಕೀಯ ಪ್ರಚಾರ ತಂತ್ರ ಎಂದು ಆರೋಪಿಸಿದರು. ಪ್ರಮುಖರಾದ ಕೆ.ಅಂಬಣ್ಣ, ಸಣ್ಣಕನಕಪ್ಪ, ಗ್ಯಾನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.