ಗಂಗಾವತಿ: ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದು ಹಲವರು ಗಾಯಗೊಂಡ ಘಟನೆ ನಗರದ ಕಿಲ್ಲಾ ಪ್ರದೇಶದಲ್ಲಿ ಭಾನುವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ನಾಲ್ವರು ಮಹಿಳೆಯರು ಹಾಗೂ ನಾಲ್ವರು ಮಕ್ಕಳು ಗಾಯಗೊಂಡಿದ್ದಾರೆ.
ಈದ್ಗಾ ಮೈದಾನದ ಹಿಂದೆ ಇರುವ ಪ್ರದೇಶದ ನಿವಾಸಿಗಳಾದ ಶಕುಂತಲಾ ದೇವಿ, ಶರಣಮ್ಮ, ಉಮಾದೇವಿ, ಶೋಭಾ ಹಾಗೂ ಮಕ್ಕಳಾದ ಅಭಿಷೇಕ, ದುರುಗಪ್ಪ, ಹನುಮೇಶ, ಸುರೇಶ ಎಂಬುವವರಿಗೆ ಪೆಟ್ಟು ಬಿದ್ದಿದೆ ಎಂದು ಸ್ಥಳೀಯ ಯುವಕರು ತಿಳಿಸಿದ್ದಾರೆ.
ಘಟನೆ ಖಂಡಿಸಿದ ಮಹಿಳೆಯರು ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಭಾನುವಾರ ರಾತ್ರಿ ಹನ್ನೊಂದು ಗಂಟೆವರೆಗೂ ಠಾಣೆ ಆವರಣದಲ್ಲಿ ಧರಣಿ ನಡೆಸಿದ ಘಟನೆ ನಡೆಯಿತು. ಸ್ಥಳಕ್ಕೆ ತೆರಳಿದ ನಗರಠಾಣೆಯ ಪೊಲೀಸರು ವಾತಾವರಣ ತಿಳಿಗೊಳಿಸಿದರು.
ನಗರದ ಕಿಲ್ಲಾ ಪ್ರದೇಶದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಶನಿವಾರ ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ವೀಕ್ಷಣೆಗೆ ಬಂದಿದ್ದ ಯುವಕನೊಬ್ಬನ ಕಾಲು ಪಕ್ಕದಲ್ಲಿ ಕುಳಿತಿದ್ದ ಕೆಲ ಮಹಿಳೆಯರಿಗೆ ತಾಕಿದೆ. ಈ ವೇಳೆ ಮಹಿಳೆಯರು ಯುವಕನ ನಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಮಹಿಳೆಯ ಪರ ವಹಿಸಿಕೊಂಡ ಹಾಗೂ ವಿರುದ್ಧದ ಎರಡು ಗುಂಪಿನ ಯುವಕರ ಮಧ್ಯೆ ಗಲಾಟೆ ಆರಂಭವಾಗಿದೆ.ಬಳಿಕ ಕೆಲ ಮನೆಗಳನ್ನು ಗುರಿಯಾಗಿಸಿಕೊಂಡು ಕಲ್ಲು ತೂರಾಟ ನಡೆದಿದೆ ಎಂದು ಯುವಕರು ದೂರಿದ್ದಾರೆ.
ಘಟನೆ ಹಿನ್ನೆಲೆ ಎಚ್ಚೆತ್ತ ಪೊಲೀಸರು ಖಾಸಗಿ ಶಾಲೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ಬಿಗಿಬಂದೋಬಸ್ತ್ ಕಲ್ಪಿಸಿದರು. ಸ್ಥಳದಲ್ಲಿ ಎರಡು ವಾಹನ ನಿಯೋಜಿಸಲಾಗಿತ್ತು. ಭಾನುವಾರವೂ ಪೊಲೀಸರ ಗಸ್ತು ಮುಂದುವರೆದಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತೆ ವಹಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.