ADVERTISEMENT

ಶಾಸನಗಳಿಂದ ಚರಿತ್ರೆ ಜ್ಞಾನ: ಪಾಟೀಲ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 7:43 IST
Last Updated 5 ಮಾರ್ಚ್ 2015, 7:43 IST

ಕೊಪ್ಪಳ: ಶಾಸನಗಳು, ಸ್ಮಾರಕಗಳು, ನಾಣ್ಯಗಳು, ಕೋಟೆ - ಕೊತ್ತಲಗಳು ಚರಿತ್ರೆ ತಿಳಿಯಲು ಸಹಾಯಕ ಎಂದು ಹಿರಿಯ ಸಾಹಿತಿ ಎಚ್.ಎಸ್. ಪಾಟೀಲ ನುಡಿದರು. ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧ­ವಾರ ಪರಂಪರಾ ಕೂಟ  ಉದ್ಘಾಟಿಸಿ  ಮಾತನಾಡಿದರು.

ಜಿಲ್ಲೆಯನ್ನು ಮೌರ್ಯ ಸಾಮ್ರಾಟ ಅಶೋಕನು ಆಳಿದ ಬಗ್ಗೆ ಕೊಪ್ಪಳದಲ್ಲಿ 2 ಶಾಸನಗಳಿವೆ. ಶಾತವಾಹನರು ಆಳಿದ ಬಗ್ಗೆ ಕೊಪ್ಪಳ ತಾಲ್ಲೂಕಿನ ಚಿಕ್ಕ ಸಿಂಧೋಗಿಯಲ್ಲಿ 5,584 ಬೆಳ್ಳಿಯ ನಾಣ್ಯಗಳು  ತಾಮ್ರ ಪಾತ್ರೆಯಲ್ಲಿ ದೊರೆತಿವೆ. ಅದರಲ್ಲಿ ಸಿಂತಸ ಎಂಬ ಪದ ಇದೆ. ಅದನ್ನು ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆಯಲ್ಲಿ ಬರೆಯಲಾಗಿದೆ.

ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಈ ಪ್ರದೇಶವನ್ನು ಆಳಿದ್ದಾರೆ. ಕವಿರಾಜ ಮಾರ್ಗದಲ್ಲಿ ವಿದಿತ ಮಹಾಕೋಪಣ ನಗರವೆಂದೂ, ರನ್ನನ ಅಜಿತನಾಥ ಪುರಾಣದಲ್ಲಿ ಕೊಪಾಣಾಚಲದಂತೆ ಪವಿತ್ರ ಅತ್ತಿಮಬ್ಬೆ ಚರಿತೆ ಎಂಬ ಉಲ್ಲೇಖಗಳು ದೊರೆತ ಪರಿಣಾಮ ಇತಿಹಾಸದಲ್ಲಿ ಕೊಪ್ಪಳದ ಚರಿತ್ರೆ ಅಜರಾಮರವಾಗಿದೆ ಎಂದರು.

ಕಮ್ಮಟದುರ್ಗದ ಕುಮಾರ ರಾಮ, ಚಂದ್ರಗಿರಿಯ ಚಂದಾಲಿಂಗೇಶ್ವರ, ಮುದೋಳದ ಸಮಗಾರ ಚಂದ ಇಂತಹ ಸಾಂಸ್ಕೃತಿಕ ವೀರರು ಕೊಪ್ಪಳ ನೆಲದಲ್ಲಿ ದೊರೆಯುತ್ತಾರೆ. ಇಟಗಿ ಮಹಾದೇವ ದೇವಾಲಯ, ಕಾಟಾಪುರದ ಮಹಾಬಲೇಶ್ವರ ದೇವಾಲಯ, ಪುರದಲ್ಲಿ ದೊರಕುವ ಕೋಟಿಲಿಂಗಗಳು ನಮ್ಮ ಕಲಾ ಪರಂಪರೆಯನ್ನು ತಿಳಿಸುತ್ತವೆ. ಇಂದು ನಾವು ವರ್ತಮಾನದಲ್ಲಿ ನಿಂತು ನಿನ್ನೆಯ ಬಗ್ಗೆ ಕಾಳಜಿ ಮಾಡುತ್ತಾ ನಾಳಿನ ಭವಿಷ್ಯವನ್ನು ಕೂಡಾ ನಮ್ಮ ಪರಂಪರೆಯ ಮೂಲಕ ಕಟ್ಟಿಕೊಳ್ಳಬೇಕಾಗುತ್ತದೆ ಎಂದರು.

ಉಪನ್ಯಾಸಕ ಸುರೇಶ ಸೊನ್ನದ ಅಧ್ಯಕ್ಷತೆ ವಹಿಸಿದ್ದರು. ಇತಿಹಾಸ ಉಪನ್ಯಾಸಕಿ ಶುಭಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಜ್ಞಾನೇಶ್ವರ ಪತ್ತಾರ ಸ್ವಾಗತಿಸಿದರು. ಗೋಣಿಬಸಪ್ಪ ವಂದಿಸಿದರು.ಶರಣಪ್ಪ ನಿರೂಪಿಸಿದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.