ADVERTISEMENT

ಸಮಗ್ರ ತನಿಖೆಗೆ ಆಗ್ರಹಿಸಿ ಮುಖಂಡರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 9:58 IST
Last Updated 12 ಏಪ್ರಿಲ್ 2017, 9:58 IST

ಕನಕಗಿರಿ: ಸಮೀಪದ ನವಲಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಸಹಾಯಕ ಕೃಷಿ ಅಧಿಕಾರಿ ದೇವೇಂದ್ರಪ್ಪ ಅವರನ್ನು ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಕಾರಟಗಿ ಎಪಿಎಂಸಿ ಉಪಾಧ್ಯಕ್ಷ ಹನುಮರಡ್ಡೆಪ್ಪ ಖ್ಯಾಡೆದ, ಗಂಗಾವತಿ ಎಪಿಎಂಸಿ ನಿರ್ದೇಶಕ ರಾಮಚಂದ್ರ ನಾಯಕ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರು ರೈತ ಸಂಪರ್ಕ ಕೇಂದ್ರದ ಮುಂದೆ ಮಂಗಳವಾರ ಪ್ರತಿಭಟಿಸಿದರು.

ಹಿರಿಯ ಮುಖಂಡ ಲಿಂಗರಾಜ ಹೂಗಾರ ಮಾತನಾಡಿ, ದೇವೇಂದ್ರಪ್ಪ ಅವರು ಕೃಷಿಹೊಂಡ ನಿರ್ಮಿಸಿಕೊಂಡ ಫಲಾನುಭವಿಗಳಿಗೆ ಸರ್ಕಾರದ ಅನುದಾನ ಒದಗಿಸದೆ ಅನ್ಯಾಯ ಎಸಗಿದ್ದಾರೆ. ನಕಲಿ ಬಿಲ್ ಸೃಷ್ಟಿಸಿ ಸರ್ಕಾರದ ಅನುದಾನವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಹಣ ನೀಡಿದವರಿಗೆ ಮಾತ್ರ ಸೌಲಭ್ಯ ಕಲ್ಪಿಸಿದ್ದು, ಅಮಾಯಕ ರೈತಾಪಿ ವರ್ಗದವರಿಗೆ ಕೃಷಿಹೊಂಡದ ಅನುದಾನ ನೀಡಿಲ್ಲ ಎಂದು ದೂರಿದರು.

ಕೃಷಿ ಇಲಾಖೆಯ ಸೌಲಭ್ಯಗಳನ್ನು ಕುರಿತು ಪ್ರಶ್ನಿಸಿದರೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ ಮಾತನಾಡಿ, ನಿಯಮದ ಪ್ರಕಾರ ಹಣ ತುಂಬಿದ ರೈತರಿಗೆ ಸ್ಪಿಂಕ್ಲರ್‌ ಪೈಪ್‌ ಕೊಡಿಸಿಲ್ಲ. ಪಶು ಭಾಗ್ಯ ಯೋಜನೆಯ ಸೌಲಭ್ಯವನ್ನು ಜನರಿಗೆ ನೀಡಿಲ್ಲ ಎಂದು ದೂರಿದರು.

ADVERTISEMENT

ಕರ್ತವ್ಯ ಲೋಪ ಎಸಗಿರುವ ಅಧಿಕಾರಿಯ ಕಾರ್ಯ ವೈಖರಿ ಕುರಿತು ಪ್ರಶ್ನಿಸಿದರೆ ಬಟ್ಟೆ ಹರಿದುಕೊಂಡು ಪ್ರಕರಣ ದಾಖಲಿಸಿದ್ದಾರೆ ಎಂದು ದೂರಿದರು.
ಎಪಿಎಂಸಿ ನಿರ್ದೇಶಕ ರಾಮಚಂದ್ರ ನಾಯಕ ಆಕಳಕುಂಪಿ ಮಾತನಾಡಿ, ಕೃಷಿ ಇಲಾಖೆಯಲ್ಲಿ ನಡೆದ ಭ್ರಷ್ಟಾಚಾರವನ್ನು ಸಮಗ್ರವಾಗಿ ತನಿಖೆ ಮಾಡಿ, ತಪಿತಸ್ಥರ ವಿರುದ್ದ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ರಾಮನಾಯ್ಕ್, ಮಲ್ಲಪ್ಪ ಕುದುರಿಕುಣಿತ, ಮಾಜಿ ಅಧ್ಯಕ್ಷ ಪ್ಯಾಟೆಪ್ಪ ನಾಯಕ ಪ್ರಮುಖರಾದ ವೀರೇಶ ಹರಿಜನ, ಶ್ರೀರಾಮ ಈಳಗೇರ, ದುರಗಪ್ಪ ಭೋವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.