ಕುಷ್ಟಗಿ: ‘ವೀರಶೈವ ಲಿಂಗಾಯದ ಧರ್ಮಗಳನ್ನು ಒಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಾಲ್ಲೂಕು ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಮಹಾಸಭಾದ ಪ್ರಮುಖರು, ‘ಧರ್ಮವನ್ನು ಒಡೆಯುವ ಪ್ರಯತ್ನಕ್ಕೆ ಕೈಹಾಕಿದರೆ ಉಗ್ರ ಹೋರಾಟ ನಡೆಸಲಾಗುವುದು’ ಎಂದು ತಿಳಿಸಿದ್ದಾರೆ.
‘ವೀರಶೈವ ಲಿಂಗಾಯತ ಒಂದೇ ಧರ್ಮ. ಆದರೆ, ಏಳಿಗೆಯನ್ನು ಸಹಿಸದ ಮುಖ್ಯಮಂತ್ರಿ, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡುವುದಾಗಿ ಹೇಳಿಕೆ ನೀಡುವ ಮೂಲಕ ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ’ ಎಂದು ಆರೋಪಿಸಿದರು.
‘ಧರ್ಮವನ್ನು ಪ್ರತ್ಯೇಕಗೊಳಿಸುವವರನ್ನು ಬೆಳೆಯಲು ಬಿಡುವುದಿಲ್ಲ. ಧರ್ಮದ ಜಾಗೃತಿಗೆ ಎಲ್ಲರೂ ಎಚ್ಚರಗೊಳ್ಳುವ ಅನಿವಾರ್ಯವಿದೆ. ಈ ವಿಷಯದಲ್ಲಿ ರಾಜ್ಯದ ವಿವಿಧ ಮಠಾಧೀಶರು, ಅಖಿಲ ಭಾರತ ವೀರೈಶೈವ ಮಹಾಸಭಾದ ಹಿರಿಯರು ತೆಗೆದುಕೊಳ್ಳುವ ನಿರ್ಧಾರಕ್ಕೆ ತಾಲ್ಲೂಕು ಘಟಕ ಬದ್ಧವಿದೆ’ ಎಂದು ಹೇಳಿದರು.
ಶಿರಸ್ತೆದಾರ ಸತೀಶ್ ಮನವಿ ಸ್ವೀಕರಿಸಿದರು. ಮದ್ದಾನೇಶ್ವರ ಮಠದ ಕರಿಬಸವ ಸ್ವಾಮೀಜಿ, ಮಹಾಸಭಾ ತಾಲ್ಲೂಕು ಅಧ್ಯಕ್ಷ ದೊಡ್ಡಯ್ಯ ಗದ್ದಡಕಿ, ಪ್ರಮುಖರಾದ ವಿಜಯಕುಮಾರ ಹಿರೇಮಠ, ವೀರಣ್ಣ ಸಬರದ, ಕಳಕಪ್ಪ ಪುರದ, ಶಿವನಗೌಡ ಮಾಲಿಪಾಟೀಲ, ದೊಡ್ಡಪ್ಪ ಬಳೂಟಗಿ, ಉಮೇಶ ಮಂಗಳೂರು, ಉಮೇಶ ಅಕ್ಕಿ, ಜಿ.ಕೆ.ಹಿರೇಮಠ, ಮಲ್ಲಿಕಾರ್ಜುನ ಮಸೂತಿ, ಕುಮಾರಸ್ವಾಮಿ ಹಿರೇಮಠ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.