ADVERTISEMENT

ಜುಮಲಾಪುರ : ಪ್ರೌಢಶಾಲೆಯಲ್ಲಿ ಶುದ್ಧ ಕುಡಿವ ನೀರಿನ ಅಭಾವ

​ಪ್ರಜಾವಾಣಿ ವಾರ್ತೆ
Published 19 ಜನವರಿ 2018, 8:54 IST
Last Updated 19 ಜನವರಿ 2018, 8:54 IST

ತಾವರಗೇರಾ: ಜುಮಲಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲಾ ಮಕ್ಕಳ ನೀರಿನ ಬವಣಿ ನೀಗಿಸಲು ಸರ್ಕಾರ ಲಕ್ಷಾಂತರ ರೂಪಾಯಿನು ನೀಡುತ್ತಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದೆ. ಈ ಕಾರಣಕ್ಕಾಗಿಯೇ ಇಲ್ಲಿನ ಮಕ್ಕಳಿಗೆ ಪ್ಲಾಸ್ಟಿಕ್‌ ಡ್ರಮ್ ನೀರೆ ಗತಿಯಾಗಿದೆ. ಮಕ್ಕಳ ಆರೋಗ್ಯ ಹದಗೆಟ್ಟರೂ ಅವರ ಬಗ್ಗೆ ಕಾಳಜಿ ತೋರುವವರು ಯಾರೂ ಇಲ್ಲ ಎಂಬ ಸ್ಥಿತಿಯಿದೆ.

ಗ್ರಾಮದ ಹೊರವಲಯದಲ್ಲಿರುವ ಈ ಸರ್ಕಾರಿ ಪ್ರೌಢ ಶಾಲೆಯಲ್ಲಿ ಒಟ್ಟು 180 ವಿದ್ಯಾರ್ಥಿಗಳಿದ್ದು, 10 ಶಿಕ್ಷಕರು ಮತ್ತು 3 ಅಡುಗೆ ಸಿಬ್ಬಂದಿ ಇದ್ದಾರೆ. ಶಾಲಾ ತರಗತಿ ಪ್ರಾರಂಭವಾಗುವ ಮುನ್ನವೇ ಶಿಕ್ಷಕರು ಇಲ್ಲಿನ ನೀರಿನ ವ್ಯವಸ್ಥೆ ಮಾಡಬೇಕಾದದ್ದು ಅಗತ್ಯ.

‘ಬೇಸಿಗೆ ಆರಂಭಕ್ಕೂ ಮುಂಚೆಯೇ ನೀರಿನ ಅಭಾವ ತಲೇದೋರಿದ್ದು, ವಿದ್ಯಾರ್ಥಿಗಳು ಬಾಯಾರಿಕೆ ನೀಗಿಸಿಕೊಳ್ಳಲು ತೋಟದ ನೀರನ್ನೇ ಅವಲಂಬಿಸುವಂತಾಗಿದೆ. ಮಕ್ಕಳ ಬೀಸಿಯೂಟಕ್ಕೆ ಈ ನೀರೇ ಗತಿ. ಈ ಶಾಲೆಯು ಸಾಸ್ವಿಹಾಳ ಮತ್ತು ಜುಮಲಾಪೂರ ಗ್ರಾಮದಿಂದ 1ಕಿಮೀ ದೂರದಲ್ಲಿದೆ. ಕಾಲ್ನಡಿಗೆಯಿಂದ ಶಾಲೆಗೆ ಬರುವ ವಿದ್ಯಾರ್ಥಿಗಳು ಬಾಯಾರಿಕೆ ನೀಗಿಸಿಕೊಳ್ಳಲು ಡ್ರಮ್‌ನಲ್ಲಿ ಸಂಗ್ರಹಿಸಿಟ್ಟ ನೀರನ್ನೇ ಕುಡಿಯಬೇಕು.

ADVERTISEMENT

ತೆರೆದ ತೊಟ್ಟಿಯ ಕಲುಷಿತ ನೀರನ್ನು ಕುಡಿವ ವಿದ್ಯಾರ್ಥಿಗಳಿಗೆ ರೋಗದ ಬೀತಿ ಶುರುವಾಗಿದೆ. ಕೆಲ ವಿದ್ಯಾರ್ಥಿಗಳು ನೀರಿನ ಅಭಾವದ ನೀಗಿಸಿಕೊಳ್ಳಲು ಮನೆಯಿಂದಲೇ ಬಾಟಲಿಯಲ್ಲಿ ನೀರು ತರುರತ್ತಾರೆ. ಶಾಲಾ ಕಾಲಾವಧಿ ಇರುವವರೆಗೂ ನೀರು ಸಾಲುವುದಿಲ್ಲ. ಶಾಲೆಗೆ ಗ್ರಾಮ ಪಂಚಾಯಿತಿ ವತಿಯಿಂದ ಪ್ರತ್ಯೇಕವಾಗಿ ಒಂದು ಕೊಳವೆಬಾವಿ ಕೊರೆಯಿಸಿ ಪೈಪ್ ಲೈನ್ ಅಳವಡಿಸಿದೆ. ಆದರೆ ಶಾಲಾ ಆಡಳಿತದ ನಿರ್ವಹಣೆ ಕೊರತೆಯಿಂದ ನೀರಿನ ಸಮಸ್ಯೆ ಉದ್ಭವಿಸಿದೆ.

ಈ ಸಮಸ್ಯೆ ಬಗ್ಗೆ ಶಾಲೆಯ ಮುಖ್ಯ ಶಿಕ್ಷಕರು ಮತ್ತು ಗ್ರಾಮಸ್ಥರು ಗ್ರಾಮ ಪಂಚಾಯತಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ದೂರು ನೀಡಿದ್ದಾರೆ. ಆದರೂ ಸಹ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಸಾರ್ವನಿಕರು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ನೀರಿನ ಸಮಸ್ಯೆ ನೀಗಿಸಲು ಕುಷ್ಟಗಿ ಶಾಸಕರು ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ನಿಗಮದಿಂದ ಶಾಲಾ ಕಟ್ಟಡ ಮತ್ತು ಕುಡಿಯುವ ನೀರಿಗಾಗಿ ₹ 8. 50 ಲಕ್ಷ ಮಂಜೂರಾತಿ ಮಾಡಿಸಿದ್ದರು. ನೀರಿಗೆಂದೇ ₹ 2.25 ಲಕ್ಷ ಪ್ರತ್ಯೇಕ ಮೀಸಲಿಡಲಾಯಿತು. ಕಾಮಗಾರಿಯನ್ನು ತ್ವರಿತಗತಿಯಲ್ಲಿ ಕೈಗೊಂಡು ಪೂರ್ಣಗೊಳಿಸುವಂತೆ ಸೂಚಿಸಲಾಯಿತು. ಆದರೆ ಗುತ್ತೆದಾರರು ಮಂದಗತಿಯಲ್ಲಿ ಕಾಮಗಾರಿ ನಡೆಸಿದರು. ಈಗ ಕಾಮಗಾರಿಗೆ ತೀವ್ರ ಹಿನ್ನಡೆಯಾಗಿದೆ’ ಎಂದು ಗ್ರಾಮಸ್ಥರು ದೂರುತ್ತಾರೆ.

‘ಶಾಲೆಯಲ್ಲಿನ ನೀರಿನ ಅಭಾವದ ಕುರಿತು ಗ್ರಾಮಸ್ಥರು ತಿಳಿಸಿಲ್ಲ. ಈ ವಿಷಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರನ್ನು ಕರೆಸಿ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

* * 

ಶಾಲಾ ಮಕ್ಕಳ ಬಗ್ಗೆ ಶಿಕ್ಷಣ ಇಲಾಖೆಗೆ ಕಾಳಜಿ ಇಲ್ಲ. ಸರ್ಕಾರ ನೀರಿಗಾಗಿಯೇ ಅನುದಾನ ನೀಡಿದೆ, ಆದರೆ ಶಾಲಾ ಮಕ್ಕಳಿಗೆ ಮಾತ್ರ ಶುದ್ಧ ನೀರು ಸಿಗುತ್ತಿಲ್ಲ.
ಶಿವಪುತ್ರಪ್ಪ ಬಪ್ಪೂರ
ಅಧ್ಯಕ್ಷ, ಕರವೇ ಗ್ರಾಮ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.