ಕುಕನೂರು: ‘ಮಧುಮೇಹ, ಬೊಜ್ಜು ಮತ್ತಿತರ ಕಾಯಿಲೆಗಳಿಗೆ ಸಿರಿಧಾನ್ಯಗಳ ಸೇವನೆ ಉತ್ತಮ ಮದ್ದಾಗಿದೆ. ಸಿರಿಧಾನ್ಯ ಬೆಳೆಯುತ್ತಿದ್ದ ಕಾಲದಲ್ಲಿ ಜನ ಉತ್ತಮ ಆರೋಗ್ಯ ಹೊಂದಿದ್ದರು’ ಎಂದು ಜೆಡಿಎಸ್ ಮುಖಂಡ ವೀರನಗೌಡ ಬಳೂಟಗಿ ಹೇಳಿದರು.
ಸಮೀಪದ ರಾಜೂರು ಗ್ರಾಮದ ಶರಣಬಸವೇಶ್ವರ ದೇವಸ್ಥಾನದಲ್ಲಿ ಜಾತ್ರೆ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಸಿರಿಧಾನ್ಯ ಕುರಿತ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಸಿರಿಧಾನ್ಯಗಳ ಬಗ್ಗೆ ಉಪನ್ಯಾಸ ನೀಡಿದ ಎಸ್.ಬಿ ಗೋಣಿ, ‘ಹವಾಮಾನ ವೈಪರೀತ್ಯದಿಂದಾಗಿ ಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿಲ್ಲ. ಮುಂಗಾರು ಮಳೆ ಅಕಾಲಿಕವಾಗಿ ಸುರಿಯುತ್ತಿದೆ. ಹೀಗಾಗಿ ರೈತರು ಸಾಂಪ್ರದಾಯಿಕ ಬೆಳೆಗಳ ಬದಲಿಗೆ ಪರ್ಯಾಯ ಬೆಳೆಯತ್ತ ಗಮನ ಹರಿಸಬೇಕು.
ಕಡಿಮೆ ನೀರಿನಲ್ಲಿ ಬೆಳೆಯುವ ಹಾಗೂ ಅಲ್ಪಾವಧಿ ಬೆಳೆಗಳಾದ ಸಿರಿಧಾನ್ಯಗಳಿಗೆ ಆದ್ಯತೆ ನೀಡಬೇಕು. ರಾಸಾಯನಿಕ ಗೊಬ್ಬರ ಬಳಸದೆ ಸಿರಿಧಾನ್ಯ ಬೆಳೆಯಬಹುದು. ನಾರಿನ ಅಂಶ, ಖನಿಜ, ಕಬ್ಬಿಣಾಂಶವುಳ್ಳ ಸಿರಿಧಾನ್ಯ ಸಂಜೀವಿನಿಯಾಗಿದೆ’ ಎಂದರು.
ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ನವಣೆ, ಹಾರಕ, ಸಜ್ಜೆ, ಬರಗ, ಸಾಮೆ, ಕೊರಲೆಗೆ ಹೆಚ್ಚಿನ ಬೇಡಿಕೆ ಬಂದಿದೆ. ಬದಲಾದ ಆಹಾರ ಪದ್ಧತಿಯಿಂದ ಜನರಲ್ಲಿ ಅಪೌಷ್ಟಿಕತೆ, ರೋಗ ನಿರೋಧಕ ಶಕ್ತಿ ಕುಂದುತ್ತಿದೆ ಎಂದು ಹೇಳಿದರು.
ಪತ್ರಕರ್ತ ಕೋಟ್ರಪ್ಪ ಮುತ್ತಾಳ ಮಾತನಾಡಿದರು. ಕೋಟ್ಟೂರೇಶ್ವರ ಸ್ಮಾಮೀಜಿ, ಬಸವರಾಜೇಂದ್ರ ಸ್ವಾಮೀಜಿ, ಪಂಚಾಚಾರ್ಯ ಶಿವಾಚಾರ್ಯ ಸ್ವಾಮೀಜಿ, ಪಕೀರಸಾಬ್ ನದಾಫ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.