ADVERTISEMENT

ಉತ್ತಮ ಪರಿಸರ; ಬಾಳು ಸುಂದರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 8:40 IST
Last Updated 22 ಜೂನ್ 2017, 8:40 IST

ಕೆರಗೋಡು: ಜನರು ಪರಿಸರ ಅಭಿವೃದ್ಧಿಯ ಬಗ್ಗೆ ಎಚ್ಚರಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಆರೋಗ್ಯ ಸ್ಥಿತಿ ಹದಗೆಡುವ ಜತೆಗೆ ಮಾರಣಾಂತಿಕ ಕಾಯಿಲೆಗೂ ತುತ್ತಾಗಬೇಕಾಗುತ್ತದೆ ಎಂದು ಮಂಡ್ಯದ ಲಯನ್ಸ್ ಸಂಸ್ಥೆ ಮಹಾಪೋಷಕ ಕೆ.ಟಿ. ಹನುಮಂತು ಆತಂಕ ವ್ಯಕ್ತಪಡಿಸಿದರು.

ಸಮೀಪದ ಶಿವಪುರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ನಡೆದ ವಿಶ್ವಯೋಗ ದಿನಾಚರಣೆ, ವಿಶ್ವ ಪರಿಸರ ದಿನಾಚರಣೆ, ವಚನಸಾಹಿತ್ಯ ಮತ್ತು ಮಲೇರಿಯ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಜನ್ಮದಿನ, ಹಬ್ಬಗಳು, ರಾಷ್ಟ್ರೀಯ ದಿನಾಚರಣೆ ಗಳಲ್ಲಿ ಗಿಡನೆಡುವ ಮೂಲಕ ಪರಿಸರ ಉಳಿಸುವ ಕಾರ್ಯದಲ್ಲಿ ಮಗ್ನರಾಗ ಬೇಕು ಎಂದು ಸಲಹೆ ನೀಡಿದರು.
ಪ್ಲ್ಯಾಸ್ಟಿಕ್ ಮುಕ್ತ ಸಮಾಜ ನಿರ್ಮಾಣ, ಮಾದಕ ವಸ್ತುಗಳ ಬಳಕೆ ನಿಷೇಧ ಸೇರಿದಂತೆ ಸಮಾಜದಲ್ಲಿ ಉತ್ತಮ ಪರಿಸರ ನಿರ್ಮಾಣಕ್ಕೆ 202 ಕಾನೂನುಗಳಿವೆ.

ADVERTISEMENT

ಆದರೆ ಕಟ್ಟುನಿಟ್ಟಾಗಿ ಜಾರಿಗೊಳಿಸದೆ ಕಾನೂನು ದುರ್ಬಲವಾಗಿದೆ ಎಂದರು, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ವಿಷಯ ಪರಿವೀಕ್ಷಕ ಚಿಕ್ಕಸ್ವಾಮಿ ಮಾತನಾಡಿ, ಯೋಗಾಸನದ ಪರಿಕಲ್ಪನೆ ಭಾರತ ಮೂಲದ್ದು. ಇಂದು 180 ದೇಶಗಳಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ದೈಹಿಕ ಮತ್ತು ಮಾನಸಿಕ ಸ್ಥಿತಿ ಗಟ್ಟಿಗೊಳಿಸಲು ಯೋಗ ಉತ್ತಮ ಎಂದರು.

ಸಮಾಜದಲ್ಲಿ ಅಂಕು ಡೊಂಕುಗಳನ್ನು ತಿದ್ದಿ ಸಮಾನತೆ ಸಾಧಿಸಲು ಅನೇಕ ವಚನಕಾರರು ಶ್ರಮಿಸಿದ್ದಾರೆ. ವಚನಗಳನ್ನು ಪಾಲನೆ ಮಾಡಿದರೆ ಜಾತಿ ಪದ್ಧತಿ ನಿರ್ಮೂಲನೆ ಮಾಡಬಹುದು ಎಂದರು.

ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕೆ.ಎಲ್‌.ಪವಿತ್ರಾ ಮಾತನಾಡಿ, ಮಲೇರಿಯ, ಚಿಕನ್ ಗುನ್ಯಾ, ಡೆಂಗಿ, ಟೈಫಾಯ್ಡ್‌ ಹೆಚ್ಚಾಗಿದ್ದು, ಅವುಗಳ ಬಗ್ಗೆ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು ಎಂದು ಮಾಹಿತಿ ನೀಡಿದರು.

ಶಾಲಾ ವಿಷಯವಾರು ಸಂಘಗಳಿಗೆ ಚಾಲನೆ ನೀಡಲಾಯಿತು. ಮಂಡ್ಯದ ಲಯನ್ಸ್ ಸಂಸ್ಥೆ ಮಹಾಪೋಷಕ ಕೆ.ಟಿ. ಹನುಮಂತು ಅವರು ಶಾಲೆಗೆ ₹ 8,100 ಮೌಲ್ಯದ 30 ಶಬ್ದಕೋಶ, ಗಿಡಗಳಿಗೆ ರಕ್ಷಣೆ ಒದಗಿಸಲು  ₹ 2,000 ಮೌಲ್ಯದ ಬಲೆ ನೀಡಿದರು.

ಮುಖ್ಯಶಿಕ್ಷಕ ಡಿ.ಎಸ್.ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಟ್ಟತಾಯಮ್ಮ, ಎಸ್್ ಡಿಎಂಸಿ ಅಧ್ಯಕ್ಷ ಉಮಾಶಂಕರ್, ಸದಸ್ಯರಾದ ಅನ್ನಪೂರ್ಣಮ್ಮ, ಉಮಾ, ಶಿಕ್ಷಕರಾದ ಎಸ್.ವಿಜಯ ಕುಮಾರ್, ಡಿ.ಆರ್. ಈರಪ್ಪ, ಕೆ.ಆರ್.ಶಶಿಧರ, ಹನುಮಂತ ಪೂಜಾರ್, ಪಿ.ರಾಘವೇಂದ್ರ, ಎಂ.ಎಚ್. ದಯಾನಂದ್, ಲಕ್ಷ್ಮಣ್ ಬಹದ್ದೂರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.