ADVERTISEMENT

ಕೈ ಕುಳಿ ಗಣಿ ನಡೆಸಲು ಪರಿಶಿಷ್ಟರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2017, 5:35 IST
Last Updated 18 ನವೆಂಬರ್ 2017, 5:35 IST

ಪಾಂಡವಪುರ : ತಾಲ್ಲೂಕಿನ ಬೇಬಿಬೆಟ್ಟದಲ್ಲಿ ಕಾವೇರಿಪುರ ಗ್ರಾಮದ ಕಲ್ಲು ಕುಟಿಕರ ವಿವಿಧೋದ್ಧೇಶ ಸಹಕಾರ ಸಂಘಕ್ಕೆ ಗಣಿಗಾರಿಕೆ ನಡೆಸಲು 4 ಎಕರೆ ಭೂಮಿ ನೀಡುವುದಾಗಿ ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದರು.

ಪಟ್ಟಣದ ಮಿನಿ ವಿಧಾನಸೌಧದದ ಸಭಾಂಗಣದಲ್ಲಿ ಶುಕ್ರವಾರ ನಡೆದ ಕಂದಾಯ, ಗಣಿ ಮತ್ತು ಭೂ ವಿಜ್ಞಾನ, ಪೊಲೀಸ್ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಟಾಸ್ಕ್‌ಫೋರ್ಸ್‌ ಸಭೆಯಲ್ಲಿ ಅವರು ಮಾತನಾಡಿದರು.

ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಾಯ್ದೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಜನರ ಜೀವನೋಪಾಯಕ್ಕೆ ಗಣಿಗಾರಿಕೆ ನಡೆಸಲು ಅವಕಾಶ ಇದ್ದು, ಕಾವೇರಿಪುರ ಗ್ರಾಮದ ಕಲ್ಲುಕುಟಿಕರ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಸೇರಿದ ಸುಮಾರು 100ಕ್ಕೂ ಹೆಚ್ಚು ಸದಸ್ಯರು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಇವರೆಲ್ಲಾ ಗಣಿಗಾರಿಕೆಯಿಂದಲೇ ತಮ್ಮ ಜೀವನ ನಡೆಸುತ್ತಿದ್ದು, ಅವರ ಜೀವನೋಪಾಯಕ್ಕೆ ಗಣಿಗಾರಿಕೆ ನಡೆಸಲು 4 ಎಕರೆ ಗಣಿ ಭೂಮಿ ನೀಡಲಾಗುವುದು ಎಂದರು.

ADVERTISEMENT

ತಾಲ್ಲೂಕಿನ ಬೇಬಿಬೆಟ್ಟದ ಸುತ್ತಮುತ್ತ ಕಳೆದ 45 ದಿನಗಳಿಂದ ಗಣಿಗಾರಿಕೆ ನಡೆಸಲು ನಿಷೇಧ ವಿಧಿಸಲಾಗಿದೆ. ಆದರೆ ಪರಿಶಿಷ್ಟ ಜನಾಂಗದವರ ಜೀವನೋಪಾಯಕ್ಕಾಗಿ ಕಲ್ಲು ಒಡೆಯಲು ನಿಷೇಧವನ್ನು ಸಡಿಲಗೊಳಿಸಲಾಗುವುದು. ಕೆಲವು ಷರತ್ತುಗಳ ಅನ್ವಯ ಅವರು ಗಣಿಗಾರಿಕೆ ನಡೆಸಬಹುದು ಎಂದು ಸ್ಪಷ್ಟಪಡಿಸಿದರು.

ಉಪ ವಿಭಾಗಾಧಿಕಾರಿ ಆರ್.ಯಶೋದಾ, ತಹಶೀಲ್ದಾರ್ ಡಿ.ಹನುಮಂತರಾಯಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ನಾಗಭೂಷಣ್, ನಾಗೇಶ್, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ರಘುರಾಂ, ಸಿಪಿಐ ದೀಪಕ್, ಪಿಡಬ್ಲ್ಯು ಎಇಇ ರಾಜೇಶ್ ಕ. ಮುನ್ಷಿ, ತಾಲ್ಲೂಕು ಪಂಚಾಯಿತಿ ಇಒ ಮಂಜುನಾಥ ಸ್ವಾಮಿ, ಪುರಸಭೆ ಮುಖ್ಯಾಧಿಕಾರಿ ಕರಿಬಸವಯ್ಯ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ರವಿಶಂಕರ್ ಹಾಜರಿದ್ದರು.

ಕಾವೇರಿ ಪುರದ ಜನರು ತಲತಲಾಂತರದಿಂದ ಕೈ ಕುಳಿ ಮಾಡಿ ಜೀವನ ನಡೆಸುತ್ತಿದ್ದಾರೆ. ಕಲ್ಲು ಕುಟಿಗರ ಪರ ನಿಂತು ಅವರಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡುವಂತೆ ಜಿಲ್ಲಾಡಳಿತವನ್ನು ಶಾಸಕ ಕೆ.ಎಸ್‌.ಪುಟ್ಟಣ್ಣಯ್ಯ ಒತ್ತಾಯಿಸುತ್ತಲೇ ಬಂದಿದ್ದರು. ಪ್ರಸ್ತುತ ಜಿಲ್ಲಾಧಿಕಾರಿಗಳು ಕಾವೇರಿಪುರ ಗ್ರಾಮಸ್ಥರಿಗೆ ಗಣಿಗಾರಿಕೆ ನಡೆಸಲು ಅವಕಾಶ ನೀಡಿರುವುದು ಅವರ ಹೋರಾಟಕ್ಕೆ ಸಂದ ಜಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.