ADVERTISEMENT

ಪೂರ್ಣಗೊಳ್ಳದ ನೀರಿನ ಯೋಜನೆ ಕಾಮಗಾರಿಗಳು

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2016, 5:16 IST
Last Updated 31 ಡಿಸೆಂಬರ್ 2016, 5:16 IST

ಶ್ರೀರಂಗಪಟ್ಟಣ: 7 ವರ್ಷಗಳ ಹಿಂದೆ ಆರಂಭವಾದ ತಾಲ್ಲೂಕಿನ ಪಿ.ಹೊಸಹಳ್ಳಿ ಮತ್ತು ಕೆಆರ್‌ಎಸ್‌ ಬಹುಗ್ರಾಮ ಕುಡಿ ಯುವ ನೀರು ಯೋಜನೆಗಳು ನನೆ ಗುದಿಗೆ ಬಿದ್ದಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರಾದ ಟಿ.ಎಂ. ದೇವೇಗೌಡ, ಅರಕೆರೆ ಸಂತೋಷ್‌ ಇತರರು ಒಕ್ಕೊರಲ ಒತ್ತಾಯ ಮಾಡಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಯಿತು.
ವಿವಿಧ ಕುಡಿಯುವ ನೀರು ಯೋಜನೆಗಳಿಗೆ ಸರ್ಕಾರ ₹ 12.90 ಕೋಟಿ ಮಂಜೂರು ಮಾಡಿದೆ. ಯೋಜನೆಗಳು ಆರಂಭವಾಗಿ ಹಲವು ವರ್ಷಗಳು ಕಳೆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದುವರೆಗೆ ಜನರಿಗೆ ಕುಡಿಯುವ ನೀರು ಕೊಡಲು ಆಗಿಲ್ಲ ಎಂದು ಅಧ್ಯಕ್ಷೆ ಮಂಜುಳಾ ಮತ್ತು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮೀಣ ಕುಡಿಯುವ ನೀರು ಯೋಜನೆ ಎಇಇ ಬಸವರಾಜು, ‘ರಸ್ತೆ ತೆರವು, ವಿದ್ಯುತ್‌ ಸಂಪರ್ಕ ಇತರ ಕಾರಣಗಳಿಂದ ಕುಡಿ ಯುವ ನೀರು ಯೋಜನೆಗಳ ಕಾಮ ಗಾರಿಗಳು ಸಕಾಲಕ್ಕೆ ಮುಗಿದಿಲ್ಲ. ಇನ್ನೂ 6 ತಿಂಗಳು ಬೇಕಾಗುತ್ತದೆ’ ಎಂದರು.

ಈ ಮಾತಿನಿಂದ ಕೋಪಗೊಂಡ ಸದಸ್ಯರು ‘ಈಗಲೇ ವಿಳಂಬವಾಗಿದೆ. ನೀವೇನು ಜನರ ಕೆಲಸ ಮಾಡಲು ಇದ್ದೀರೋ, ಇನ್ನೇನಾದರೂ ಮಾಡ್ತೀ ರೋ...’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೃಷಿ ಇಲಾಖೆಯ ಯೋಜನೆಗಳು ರೈತರಿಗೆ ಸಮಪರ್ಕವಾಗಿ ಮುಟ್ಟುತ್ತಿಲ್ಲ. ಗ್ರಾಮೀಣ ರೈತರಿಗೆ ಸರಿಯಾದ ಮಾಹಿತಿಯೂ ಸಿಗುತ್ತಿಲ್ಲ. ಕೃಷಿ ಇಲಾಖೆ ಅಧಿಕಾರಿಗಳು ರೈತ ಸ್ನೇಹಿಯಾಗಿ ಕೆಲಸ ಮಾಡುತ್ತಿಲ್ಲ. ಕೃಷಿ ಯಂತ್ರೋಪಕರಣ ವಿತರಣೆಗೆ ಜನಪ್ರತಿನಿಧಿಗಳನ್ನು ಏಕೆ ಕರೆಯುತ್ತಿಲ್ಲ? ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸೀತಾರಾಮು ಅವರನ್ನು ಪ್ರಶ್ನಿಸಿದರು.

ತಾಲ್ಲೂಕಿನ ವಿವಿಧೆಡೆ ಸರ್ಕಾರಿ ಶಾಲಾ ಕಟ್ಟಡಗಳು ಶಿಥಿಲಗೊಂಡಿದ್ದರೂ ಅವುಗಳನ್ನು ದುರಸ್ತಿ ಮಾಡಿಸಿಲ್ಲ. ದೊಡ್ಡ ಪಾಳ್ಯ, ನಗುವನಹಳ್ಳಿ, ಗಣಂ ಗೂರು ಇತರ ಕಡೆ ಶಾಲಾ ಕಟ್ಟಡಗಳು ಇಂದೋ ನಾಳೆಯೋ ಬೀಳುವ ಸ್ಥಿತಿಯಲ್ಲಿವೆ.

ಪರಿಶಿಷ್ಟ ಜಾತಿ, ಪಂಗಡದ ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿ ವೇತನ ಕೊಡಿಸಲೂ ಅಧಿಕಾರಿಗಳು ವಿಫಲರಾಗಿದ್ದಾರೆ. ಸಾಕಷ್ಟು ಕಡೆ ಅಂಗನವಾಡಿ ಕಟ್ಟಡಗಳು ಕೂಡ ಶಿಥಿಲವಾಗಿವೆ. ಎಂ.ಶೆಟ್ಟಹಳ್ಳಿ ಗ್ರಾಮದಲ್ಲಿ ಲಕ್ಷಾಂತರ ರೂಪಾಯಿ ವೆಚ್ಚದ ಅಂಗನ ವಾಡಿ ಕಟ್ಟಡ ಅಪೂರ್ಣಗೊಂಡಿದೆ. ಕೊಚ್ಚೆ ಗುಂಡಿಯಲ್ಲಿ ಈ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕೆ ಯಾರು ಹೊಣೆ ಎಂದು ಸದಸ್ಯರಾದ ಉಮೇಶ್‌, ದೇವ ರಾಜು, ವಿಜಯಲಕ್ಷ್ಮಿ ಅಧಿಕಾರಿಗಳನ್ನು ಕೇಳಿದರು.

ಮಹದೇವಪುರ ಗ್ರಾಮದ ಕುಡಿಯುವ ನೀರು ಸಮಸ್ಯೆ ಕುರಿತು ಚರ್ಚೆ ನಡೆಯುತ್ತಿದ್ದ ವೇಳೆ ಮಹದೇವ ಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗದೀಶ್‌ ಮತ್ತು ಕಾರ್ಯನಿರ್ವಾಹಕ ಅಧಿಕಾರಿ ಮಹದೇವಸ್ವಾಮಿ ಅವರ ನಡುವೆ ವಾಗ್ವಾದ ನಡೆಯಿತು. ಸದಸ್ಯರಾದ ಎನ್‌.ಪಿ.ಸುರೇಶ್‌, ಉಷಾ ಕಾಮರಾಜ್‌, ಬಿ.ಎಚ್‌. ಕೋಮಲ, ಭವ್ಯಾ, ಭಾರತಿ, ಡಿ. ಧನಲಕ್ಷ್ಮಿ, ರಾಮಕೃಷ್ಣ, ವಾಸು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.