ADVERTISEMENT

ಯಲಾದಹಳ್ಳಿ: ಮಾದರಿ ಸಾವಯವ ಗ್ರಾಮ

ವಿಕಸನ ಸಂಸ್ಥೆಯಿಂದ ಆರು ಸ್ವಸಹಾಯ ಸಂಘಗಳ ಸ್ಥಾಪನೆ: ಹೈನುಗಾರಿಕೆಯೂ ಬಲು ಜೋರು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2017, 8:11 IST
Last Updated 14 ಏಪ್ರಿಲ್ 2017, 8:11 IST
ಕಿಕ್ಕೇರಿ ಹೋಬಳಿಯ ಯಲಾದಹಳ್ಳಿ ಗ್ರಾಮದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ನಿರತರಾಗಿರುವ ಕೃಷಿಕ ಮಹಿಳೆ
ಕಿಕ್ಕೇರಿ ಹೋಬಳಿಯ ಯಲಾದಹಳ್ಳಿ ಗ್ರಾಮದಲ್ಲಿ ಸಾವಯವ ಕೃಷಿ ಪದ್ಧತಿಯಲ್ಲಿ ನಿರತರಾಗಿರುವ ಕೃಷಿಕ ಮಹಿಳೆ   

ಕಿಕ್ಕೇರಿ: ಸಾವಯವ ಕೃಷಿ, ಹೈನುಗಾರಿಕೆಗೆ ಒತ್ತು ನೀಡುವ ಮೂಲಕ ಸ್ವಾವಲಂಬಿ ಬದುಕನ್ನು ಕಟ್ಟಿಕೊಂಡಿ ದ್ದಾರೆ ತಾಲ್ಲೂಕಿನ ಯಲಾದಹಳ್ಳಿ ಗ್ರಾಮಸ್ಥರು.
ಮೂರು ವರ್ಷಗಳ ಹಿಂದೆ ಗ್ರಾಮದ ಭೂಮಿ ಬೆಂಗಾಡಿನಂತಿತ್ತು. ಈಗ ಸಾವಯವ ಗ್ರಾಮವಾಗಿ ಪರಿವರ್ತನೆ ಯಾಗಿದೆ. ಸ್ವಾವಲಂಬಿ ಜೀವನಕ್ಕೆ ಹೊಸ ರೂಪ ನೀಡುವಲ್ಲಿ ಸಾವಯವ ಕೃಷಿ ಪದ್ಧತಿ ನೆರವಾಗಿದೆ.

ಈ ಕಾರ್ಯಕ್ಕೆ ವಿಕಸನ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯು ಬೆನ್ನೆಲುಬಾಗಿ ನಿಂತಿದೆ. ಗ್ರಾಮದ ರೈತರು ಹನಿ ನೀರಾವರಿ ಜತೆಗೆ ಜೀವಾಮೃತ, ಬೀಜಾಮೃತ, ಪಂಚಗವ್ಯವನ್ನು ತಯಾರಿಸುತ್ತಾರೆ.

ವಿಕಸನ ಸಂಸ್ಥೆಯಿಂದ ಆರು ಸ್ವಸಹಾಯ ಸಂಘಗಳು ಸ್ಥಾಪಿತವಾಗಿದ್ದು, ಸಂಘದ ಅಭಿವೃದ್ಧಿಗಾಗಿ ತಲಾ 6 ಲಕ್ಷ ಸಹಾಯಧನವನ್ನು ನಬಾರ್ಡ್ ಸಂಸ್ಥೆ ನೀಡಿದೆ.

ಗ್ರಾಮದ ಎಲ್ಲ ರೈತರೂ ಮೂರು ವರ್ಷಗಳಿಂದ ಸಾವಯವ ಕೃಷಿ ಅಳವಡಿಸಿಕೊಂಡಿದ್ದಾರೆ. ಕಬ್ಬು, ಭತ್ತದಂತಹ ವಾಣಿಜ್ಯ ಬೆಳೆ ಬೆಳೆಯದೇ ಪರ್ಯಾಯ ಬೆಳೆಯಾಗಿ ಬದನೆ, ಕುಂಬಳ, ಸೌತೆ, ಅವರೆ, ಹಲಸಂದೆ, ಮೆಣಸಿನಕಾಯಿ, ಮೂಲಂಗಿ, ಪಪ್ಪಾಯಿ ಯಂತಹ ಬೆಳೆ ಬೆಳೆಯುತ್ತಿದ್ದಾರೆ.

ಈ ಹಿಂದೆ ಗ್ರಾಮದ ಸುತ್ತಲೂ ಇದ್ದ ತಿಪ್ಪೆಗಳು ದುರ್ವಾಸನೆ ಬೀರುತ್ತಿದ್ದವು. ಈ  ಅವು ಕಾಂಪೋಸ್ಟ್ ಗೊಬ್ಬರ ನೀಡುವಂತಾಗಿವೆ. ಕೃಷಿ ಹೊಂಡ, ಮನೆಗಳಿಗೆ ಗೋಬರ್ ಗ್ಯಾಸ್, ಸೋಲಾರ್ ದೀಪ, ಜಪಾನ್ ಮಾದರಿ ಎರೆಹುಳು ಘಟಕ, ಅಜೋಲಾ ಬೆಳೆಯ ತೊಟ್ಟಿ ನಿರ್ಮಿಸಿಕೊಂಡಿದ್ದಾರೆ ಇಲ್ಲಿನ ರೈತರು. ಆ ಮೂಲಕ ಮಾದರಿ ಗ್ರಾಮವಾಗಿ ರೂಪುಗೊಂಡಿದ್ದು, ಜನರೂ ಸ್ವಾವಲಂಬಿಗಳಾಗಿದ್ದಾರೆ.

‘ಸಾವಯವ ಆಹಾರ ಪದಾರ್ಥಕ್ಕೆ ಬೇಡಿಕೆ ಇದೆ. ಉತ್ತಮ ಬೆಲೆಯೂ ಇದೆ. ರಸಾಯನಿಕ ಗೊಬ್ಬರದಿಂದ ವಿಷವಾಗಿದ್ದ ಭೂಮಿಯು ಸಾವಯವದಿಂದ ಹಸಿರಾಗಿದೆ. ನಾವೂ ಆರೋಗ್ಯ ವಾಗಿದ್ದೇವೆ’ ಎನ್ನುತ್ತಾರೆ ಪಪ್ಪಾಯಿ ಬೆಳೆಗಾರ ಶಂಕರಪ್ಪ.

ಬೇವಿನ ಸೊಪ್ಪು, ಬೇವಿನ ಬೀಜ, ಮಜ್ಜಿಗೆ, ಮೆಣಸಿನಕಾಯಿ, ಬೆಳ್ಳುಳ್ಳಿ, ಶುಂಠಿ ಪೇಸ್ಟ್ ಮಾಡಿ ಬೆಳೆಗೆ ಸಿಂಪಡಿಸಿ ಕೀಟಗಳನ್ನು ಹತೋಟಿಗೆ ತರುವ ಮಾದರಿ ಮೆಚ್ಚುವಂತದ್ದು. ‘ಜಾನುವಾರುಗಳ ಸಗಣಿ ಬಳಸಿ ಪ್ರತಿ ಮನೆಯಲ್ಲಿ ನಿರ್ಮಿಸಿಕೊಂಡಿರುವ ಗೋಬರ್‌ ಗ್ಯಾಸ್‌ನಿಂದಾಗಿ ಹಣ– ಕಟ್ಟಿಗೆ ಉಳಿತಾಯವಾಗುತ್ತಿದ್ದು, ಕಾಡು ಕಡಿಯುವುದು ತಪ್ಪಿದೆ.

ಹೈನುಗಾರಿಕೆಗೂ ಒತ್ತು ನೀಡಲಾಗಿದೆ. ಹಾಲು ಉತ್ಪಾದಕರ ಸಂಘವೂ ಚೆನ್ನಾಗಿ ನಡೆಯುತ್ತಿದೆ. ಪ್ರತಿ ತಿಂಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ’ ಎನ್ನುತ್ತಾರೆ ಲೋಕಾಮಣಿ. ‘ಸಾವಯವ ಗ್ರಾಮವಾಗಿ ಪರಿವರ್ತನೆಯಾದ ಮೇಲೆ ಭೂಮಿಯ ಫಲವತ್ತದೆ ಹೆಚ್ಚಾಗಿದೆ’ ಎನ್ನುತ್ತಾರೆ ರೈರ ಶಿವರಾಜ್‌.
-ಗೋವಿಂದರಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.