ಕಿಕ್ಕೇರಿ: ದೇಶ ಕಾಯುವ ಸಿಪಾಯಿಗಳ ಕುಟುಂಬದ ಜವಾಬ್ದಾರಿ ಸರ್ಕಾರ ಹಾಗೂ ಇಡೀ ಸಮುದಾಯಕ್ಕೆ ಸೇರಿದೆ ಎಂಬುದು ಅರಿತರೆ ದೇಶ ಸುಭದ್ರವಾ ಗಲಿದೆ ಎಂದು ಮಾಜಿ ಯೋಧ ಲೋಕೇಶ್ ಅಭಿಪ್ರಾಯಪಟ್ಟರು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಕರವೇ, ಆಟೊ ಚಾಲಕರ ಸಂಘ ಹಾಗೂ ಸ್ಪಂದನಾ ಫೌಂಡೇಷನ್ ಗುರುವಾರ ಏರ್ಪಡಿಸಿದ್ದ ಹನುಮಂತ ಕೊಪ್ಪದ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಿಯಾಚಿನ್ನಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದೇನೆ. ಈ ಪ್ರದೇಶದಲ್ಲಿ ಸಾವು– ಬದುಕಿನೊಂದಿಗೆ ಸೆಣಸಾಟ ನಡೆಸಿ, ದೇಶ ರಕ್ಷಿಸುವ ಕಾಯಕ ದೇಶ ಸೇವೆಯಾಗಿದೆ.
ಕೊಪ್ಪದ ಇಷ್ಟು ದಿನಗಳ ಕಾಲ ಬದುಕಿದ್ದೇ ಪವಾಡವಾಗಿದೆ. ಹುತಾತ್ಮ ವೀರಸೇನಾನಿ ಕುಟುಂಬಕ್ಕೆ ಸರ್ಕಾರ ಆಸರೆಯಾಗಿ ನಿಲ್ಲಬೇಕಿದೆ. ಹುಟ್ಟಿದ ಊರಿನಲ್ಲಿ ಸ್ಮಾರಕ ನಿರ್ಮಾಣವಾದಲ್ಲಿ ಯುವಕರು ಸೇನೆ ಸೇರಲು ಸ್ಪೂರ್ತಿಯಾಗಲಿದೆ ಎಂದರು.
ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಸಲು ಗುರುಮೂರ್ತಿ ಮಾತನಾಡಿ, ಬಡತನದಲ್ಲಿಯೇ ಹುಟ್ಟಿ, ಬಡತನದ ಲ್ಲಿಯೇ ಸಾವು ಕಂಡ ಯೋಧರ ಕುಟುಂಬದವರನ್ನು ಗೌರವಿಸುವ ಕೆಲಸ ಸಮುದಾಯದಲ್ಲಿ ಆಗದಹೊರತು, ದೇಶದಲ್ಲಿನ ದುಷ್ಕೃತ್ಯಗಳು ಧಮನವಾಗ ಲಾರದು ಎಂದು ಹೇಳಿದರು.
ನಾಗರಿಕರು ಮೇಣದ ಬತ್ತಿ ಬೆಳಗಿಸುವ ಮೂಲಕ ಹುತಾತ್ಮ ಯೋಧನಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಕರವೇ ಹೋಬಳಿ ಘಟಕದ ಅಧ್ಯಕ್ಷ ಮಂಜು, ಸುರೇಶ್, ಜಗದೀಶ್, ಸುರೇಶ್, ಉಮೇಶ್, ಡಿ. ಹನುಮಂತ ಶೆಟ್ಟಿ ಇತರರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.