ಮದ್ದೂರು: ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಂಡ್ಯ ಜಿಲ್ಲಾ ಕಾಂಗ್ರೆಸ್ ರೈತ ಕೂಲಿ ಕಾರ್ಮಿಕ ಘಟಕದ ಸದಸ್ಯರು ಸಮೀಪದ ಶಿವಪುರ ಕೊಪ್ಪ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದರು.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಘೋಷಣೆ ಕೂಗಿದರು. ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಮೋಹನಕುಮಾರ್ ಮಾತನಾಡಿ, ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಎಲ್ಲ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು.
ರೈತರು ಬೆಳೆಯುವ ಕಬ್ಬಿನಿಂದ ಎಥೆನಾಲ್ ತೆಗೆದು ಇಂಧನವಾಗಿ ಬಳಕೆ ಮಾಡಬೇಕು. ರೈತರು ಬೆಳೆದ ಕಬ್ಬಿಗೆ ದುಪ್ಪಟ್ಟು ದರ ನಿಗದಿ ಮಾಡಬೇಕು. ರೈತರಿಗೆ ವೈಜ್ಞಾನಿಕ ಲಾಭದಾಯಕ ಬೆಲೆ ನಿಗದಿ ಮಾಡಬೇಕು ಎಂದು ಆಗ್ರಹಿಸಿದರು.
ಗದುಗಿನಲ್ಲಿ ಯಡಿಯೂರಪ್ಪ ಪ್ರವಾಸ ಮಾಡುತ್ತಿದ್ದಾಗ ರೈತರೊಬ್ಬರು ಮಹಾದಾಯಿ ನೀರಿನ ವಿಚಾರ ಪ್ರಸ್ತಾಪಿಸಿದಕ್ಕೆ, ಅವರ ಮೇಲೆ ಬಿಜೆಪಿ ಮಾಜಿ ಸಚಿವ ಕಳಸಪ್ಪ ಬಂಡಿ ಹಲ್ಲೆ ಮಾಡಿರುವುದು ಖಂಡನೀಯ ಎಂದರು.
ಜಿಲ್ಲಾ ಕಾರ್ಯದರ್ಶಿ ಎಂ.ಸಿ.ಮರಿಯಪ್ಪ, ಜಿಲ್ಲಾ ಸಂಚಾಲಕ ಜಯರಾಮು, ಜಿಲ್ಲಾ ಕಾರ್ಯದರ್ಶಿ ನಾಗರಾಜು, ಯುವ ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್, ಕೆ.ಟಿ. ಗಿರೀಶಬಾಬು ಇದ್ದರು.
*
ಪ್ರಧಾನ ಮಂತ್ರಿ ರೈತರ ಸಾಲ ಮನ್ನಾ ಮಾಡದೇ, 20 ಕಾರ್ಪೋರೇಟ್ ಕುಳಗಳ ಸಾಲ ಮನ್ನಾ ಮಾಡಿರುವುದು ನಾಚಿಕೆಗೇಡು.
-ದೇಶಹಳ್ಳಿ ಆರ್.ಮೋಹನಕುಮಾರ್,
ಅಧ್ಯಕ್ಷ, ರೈತ ಕೂಲಿಕಾರ್ಮಿಕ ಕಾಂಗ್ರೆಸ್ ಸಮಿತಿ ಜಿಲ್ಲಾ ಘಟಕ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.