ADVERTISEMENT

ವ್ಯವಸ್ಥೆ: ಪೆರಿಯಾರ್‌ ಹೋರಾಟ ಅನನ್ಯ

‘ಮನುಸ್ಮೃತಿ’ ಸುಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಭಗವಾನ್‌ ಜಾತಿ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2014, 9:31 IST
Last Updated 19 ಸೆಪ್ಟೆಂಬರ್ 2014, 9:31 IST

ಮಂಡ್ಯ: ‘ಜಾತಿ ವ್ಯವಸ್ಥೆ ಹಾಗೂ ಮೌಢ್ಯತೆ ವಿರುದ್ಧ ಪೆರಿಯಾರ್‌ ಹೋರಾಟ ಮಾಡಿದ್ದಾರೆ. ಅವರ ತತ್ವಗಳನ್ನು ಯುವ ಜನತೆ ಓದಿಕೊಳ್ಳಬೇಕು’ ಎಂದು ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್‌ ಹೇಳಿದರು.

ನಗರದ ಕಾವೇರಿ ವನದಲ್ಲಿ ಅಂಬೇಡ್ಕರ್‌್ ಪ್ರತಿಮೆ ಎದುರು ಗುರುವಾರ ಹಮ್ಮಿಕೊಂಡಿದ್ದ ಪೆರಿಯಾರ್ ರಾಮಸ್ವಾಮಿ ನಾಯ್ಕರ್‌ ಅವರ 136ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ‘ಮನುಸ್ಮೃತಿ’ ಗ್ರಂಥ ಸುಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದಲ್ಲಿ ಸಾವಿರಾರು ಜಾತಿ ಸೃಷ್ಟಿ ಮಾಡಿದ್ದರಿಂದಾಗಿ ದೇಶ ವಿನಾಶದತ್ತ ಸಾಗಿದೆ. ಅದು ಮನುಷ್ಯರ ನಡುವೆ ದ್ವೇಷವನ್ನು ಬಿತ್ತುವ ಅಸ್ತ್ರವಾಗಿದೆ. ಪೆರಿಯಾರ್ ಅವರು ಮೂಲತಃ ಚಿತ್ರದುರ್ಗದ ಮದಕರಿ ನಾಯಕನ ವಂಶಸ್ಥರು. ಪರಕೀಯರ ದಾಳಿಯಿಂದ ನಾಯಕರ ವಂಶದವರು ಚದುರಿ ಹೋದರು. ಆಗ ಪೆರಿಯಾರ್ ಅವರ ತಂದೆ ತಮಿಳುನಾಡಿಗೆ ಹೋಗಿ ನೆಲೆ ನಿಂತರು’ ಎಂದು ಇತಿಹಾಸವನ್ನು ಸ್ಮರಿಸಿದರು.

‘ಪೆರಿಯಾರ್ ಅವರು ಜ್ಯೋತಿಬಾ ಫುಲೆ, ಅಂಬೇಡ್ಕರ್ ಅವರ ಮಟ್ಟದಲ್ಲಿ ಎತ್ತರದ ವ್ಯಕ್ತಿಯಾಗಿ ನಿಲ್ಲುತ್ತಾರೆ. ಬೌದ್ಧ ಧರ್ಮ ನಾಶವಾದ ಬಳಿಕ ಮನುಸ್ಮೃತಿಯನ್ನು ನಮ್ಮ ಮೇಲೆ ಹೇರಲಾಯಿತು. ಮಹಿಳೆಯರಿಗೆ ಸಮಾನತೆ, ಶೂದ್ರರಿಗೆ ವಿದ್ಯೆ, ಆಸ್ತಿಯ ಹಕ್ಕನ್ನೂ ಮನುಸ್ಮೃತಿ ನೀಡಿರಲಿಲ್ಲ. ಜಾತಿಯ ಹೆಸರಲ್ಲಿ ಮನುಷ್ಯನನ್ನು ಅತ್ಯಂತ ಕೀಳಾಗಿ ಕಾಣುವ ನಿಯಮ ಹೇರಲಾಗುತ್ತದೆ. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ –ಈ ಮೂರೂ ಜಾತಿಗಳನ್ನು ಬಿಟ್ಟರೆ, ಉಳಿದ 5,997 ಜಾತಿಗಳು ಕೀಳು ಎಂದು ಬಿಂಬಿಸುತ್ತಾರೆ. ಆದ್ದರಿಂದ ಮನುಸ್ಮೃತಿ ಸುಡಲಾಯಿತು’ ಎಂದು ಸಮರ್ಥಿಸಿಕೊಂಡರು.

‘ಪೆರಿಯಾರ್ ಅವರೂ 10 ಬಾರಿ ಮನುಸ್ಮೃತಿ ಸುಟ್ಟಿದ್ದಾರೆ. ಶ್ರೀರಾಮ ದೇವರಲ್ಲ ಎಂದು ಸಾರಿದ್ದಾರೆ’ ಎಂದು ತಿಳಿಸಿದರು.
ಸಾಹಿತಿ ಡಾ.ಮಾಯೀಗೌಡ, ಬಿಎಸ್‌ಪಿ ಮುಖಂಡ ಕೃಷ್ಣಮೂರ್ತಿ, ಉದ್ಯಮಿ ಗೋಪಾಲಸ್ವಾಮಿ, ವಕೀಲ ಜೆ. ರಾಮಯ್ಯ, ಅನಸೋಗೆ ಸೋಮಶೇಖರ್, ನಾಗರಾಜ್ ನರಸಿಂಹಮೂರ್ತಿ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.