ಶ್ರೀರಂಗಪಟ್ಟಣ: ಹಲವು ವರ್ಷಗಳಿಂದ ರಸ್ತೆ ಹದಗೆಟ್ಟಿದ್ದರೂ ದುರಸ್ತಿ ಮಾಡಿಸಿಲ್ಲ ಎಂಬ ಕಾರಣಕ್ಕೆ ಗ್ರಾಮಸ್ಥರು ಶಾಸಕ ರಮೇಶ ಬಂಡಿಸಿದ್ದೇಗೌಡ ಅವರನ್ನು ತಡೆದು ಪ್ರಶ್ನಿಸಿದ ಪ್ರಸಂಗ ತಾಲ್ಲೂಕಿನ ಮೇಳಾಪುರ ಗ್ರಾಮದಲ್ಲಿ ನಡೆದಿದ್ದು, ಅದರ ವಿಡಿಯೊ ವೈರಲ್ ಆಗಿದೆ.
ಚಂದಗಾಲು– ಮೇಳಾಪುರ ಗ್ರಾಮಗಳ ಸಂಪರ್ಕ ರಸ್ತೆ ಹದಗೆಟ್ಟಿದ್ದು, ಬೈಕ್ ಓಡಿಸಲೂ ಆಗದ ಸ್ಥಿತಿ ಬಂದಿದೆ. ಹೆಜ–ಹೆಜ್ಜೆಗೂ ಗುಂಡಿಗಳು ನಿರ್ಮಾಣವಾಗಿವೆ. ಈ ಮಾರ್ಗದಲ್ಲಿ ಬಸ್, ಕಾರು, ಕಬ್ಬು ತುಂಬಿದ ಲಾರಿಗಳು, ಎತ್ತಿನ ಗಾಡಿಗಳು ಹೆಚ್ಚು ಓಡಾಡುತ್ತವೆ. ಆದರೂ ರಸ್ತೆಯನ್ನು ದುರಸ್ತಿ ಮಾಡಿಸಿಲ್ಲ. ನಿಮಗೆ ರಸ್ತೆಯ ದುಸ್ಥಿತಿ ಕಾಣುತ್ತಿಲ್ಲವೆ ಎಂದು ಗ್ರಾಮದ ರಾಜು, ಅಶೋಕ್, ಪ್ರದೀಪ್, ಡೈರಿ ಶಂಕರ್ ಪ್ರಶ್ನಿಸಿದರು.
‘ರಸ್ತೆಯ ದುರಸ್ತಿಯ ಬಗ್ಗೆ ಭರವಸೆ ನೀಡದಿದ್ದರೆ ಕಾರಿಗೆ ಅಡ್ಡ ಮಲಗುತ್ತೇವೆ’ ಎಂದೂ ಎಚ್ಚರಿಸಿದರು. ಗ್ರಾಮಸ್ಥರು ದಿಢೀರ್ ಆಗಿ ತಡೆದಿದ್ದರಿಂದ ಅವಾಕ್ಕಾದ ಶಾಸಕ ರಮೇಶ, ‘ರಸ್ತೆ ನಿರ್ಮಾಣ, ಕುಡಿಯುವ ನೀರು ಒದಗಿಸುವ ಕೆಲಸಗಳು ಆದ್ಯತೆ ಮೇರೆಗೆ ನಡೆಯುತ್ತಿವೆ. ಚಂದಗಾಲು– ಮೇಳಾಪುರ ರಸ್ತೆಯನ್ನೂ ಶೀಘ್ರ ಅಭಿವೃದ್ಧಿ ಮಾಡಲಾಗುವುದು’ ಎಂದು ಭರವಸೆ ನೀಡಿದ ಬಳಿಕ ಪರಿಸ್ಥಿತಿ ತಿಳಿಯಾಯಿತು ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.