ಶ್ರೀರಂಗಪಟ್ಟಣ: ತಾಲ್ಲೂಕಿನ ನಗುವನಹಳ್ಳಿ ಗ್ರಾಮದ ಯುವ ಜೋಡಿಯೊಂದು ಪ್ರಕೃತಿ ತಾಣದಲ್ಲಿ ಸಸಿಗಳನ್ನು ನೆಡುವ ಮೂಲಕ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿರಿಸಿತು. ನಗುವನಹಳ್ಳಿ ಗ್ರಾಮದ ಮರಿಮಾದಯ್ಯ ಅವರ ಮಗ ಸುರೇಶ್ (27) ಮತ್ತು ಅದೇ ಗ್ರಾಮದ ಶಿವಣ್ಣ ಅವರ ಪುತ್ರಿ ಜ್ಯೋತಿ (21) ಸತಿ–ಪತಿಗಳಾದರು.
ಕೆ.ಎಸ್.ಆರ್.ಟಿ.ಸಿ. ಬಸ್ ಚಾಲಕರಾಗಿರುವ ಸುರೇಶ್ ಹಲವು ದಿನಗಳ ಹಿಂದೆ ಪದವಿ ಪಡೆದಿರುವ ಜ್ಯೋತಿ ಅವರನ್ನು ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಇದಕ್ಕೆ ಹುಡುಗಿಯ ಪೋಷಕರು ಸಮ್ಮತಿಸಿದ್ದರು. ಹಾಗಾಗಿ ಬಂಧುಗಳು ಹಾಗೂ ಹಿರಿಯರ ಸಮ್ಮುಖದಲ್ಲಿ ಕರಿಘಟ್ಟದಲ್ಲಿ ಈ ಇಬ್ಬರ ಮದುವೆ ನಡೆಯಿತು.
ಸುರೇಶ್–ಜ್ಯೋತಿ ಕೆ.ಶೆಟ್ಟಹಳ್ಳಿ ಮೀಸಲು ಅರಣ್ಯದ ಕರಿಘಟ್ಟದಲ್ಲಿ ಆಲ, ಹೊಂಗೆ, ಅರಳಿ, ಮಾವು ಇತರ ಗಿಡಗಳನ್ನು ನೆಟ್ಟು ನೀರೆಯಿತು. ಮದುವೆಗೆ ಬಂದವರು ಕೂಡ ಒಂದೊಂದು ಗಿಡ ನೆಟ್ಟರು. ಈ ಸರಳ ಮದುವೆಗೆ ಪರಸರ ಪ್ರೇಮಿ ವೈ. ರಮೇಶ್, ಸಾಹಿತಿ ಸಾ.ವೆ.ರ ಸ್ವಾಮಿ, ಕ್ಷೇತ್ರದ ಜೆ.ಡಿ.ಎಸ್ ಮಾಜಿ ಅಧ್ಯಕ್ಷ ಎನ್.ವಿ.ಚಲುವರಾಜು, ಎನ್. ಶಿವಸ್ವಾಮಿ, ಮಹದೇವಸ್ವಾಮಿ ಹಾಗೂ ವಧು ಮತ್ತು ವರನ ಪೋಷಕರು ಸಾಕ್ಷಿಯಾದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.