ADVERTISEMENT

ಈಜಲು ಹೋದ ಬಾಲಕ ನೀರುಪಾಲು

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2017, 8:51 IST
Last Updated 11 ಸೆಪ್ಟೆಂಬರ್ 2017, 8:51 IST

ಮೈಸೂರು: ಇಲ್ಲಿನ ಕಟ್ಟೆಮಳಲವಾಡಿಯ ನೂತನ ನ್ಯಾಯಾಲಯ ಕಟ್ಟಡದ ಹಿಂಭಾಗದ ದೇವರ ಕೊಳದಲ್ಲಿ ಈಜಲು ಹೋಗಿದ್ದ ಮೋಹನ್‌ (13) ಎಂಬಾತ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಕೆ.ಜಿ.ಕೊಪ್ಪಲಿನ ಸಿದ್ದಪ್ಪಾಚಾರಿ ಎಂಬುವರ ಪುತ್ರ ಮೋಹನ್‌, ಸರಸ್ವತಿಪುರಂನ ಜೆಎಸ್‌ಎಸ್‌ ಶಾಲೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿ. ಕಸ–ಕಡ್ಡಿಗಳಿಂದ ತುಂಬಿದ್ದ ಈ ಕೊಳವನ್ನು ಗಣೇಶಮೂರ್ತಿ ವಿಸರ್ಜನೆಗೆ ಈಚೆಗೆ ಶುಚಿಗೊಳಿಸಲಾಗಿತ್ತು.

ಭಾನುವಾರ ಸಂಜೆ ನಾಲ್ವರು ಸ್ನೇಹಿತರೊಂದಿಗೆ ಈಜಲು ಕೊಳಕ್ಕೆ ಇಳಿದಿದ್ದರು. ಎಲ್ಲರೂ ಮೇಲಿಂದ ಕೆಳಗೆ ನೆಗೆದಿದ್ದರು. ಬಹುಹೊತ್ತಾದರೂ ಮೋಹನ್‌ ಮೇಲೇಳದ ಪರಿಣಾಮ ಆತಂಕಗೊಂಡ ಸ್ನೇಹಿತರು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಮನೆಗೆ ತೆರಳಿ ಪೋಷಕರಿಗೆ ಮಾಹಿತಿ ನೀಡಿದ್ದಾರೆ ಎಂದು ಅಶೋಕಪುರಂ ಠಾಣೆಯ ಪೊಲೀಸರು ತಿಳಿಸಿದ್ದಾರೆ.

ಬಾಲಕನಿಗಾಗಿ ಸಂಜೆ 6 ಗಂಟೆಯಿಂದ ಸ್ಥಳೀಯರ ನೆರವಿನೊಂದಿಗೆ ಪೋಷಕರು ಹುಡುಕಾಟ ನಡೆಸಿದರೂ ಮೃತದೇಹ ಪತ್ತೆಯಾಗಿಲ್ಲ. ಹೀಗಾಗಿ, ಸಂಜೆ 7ಕ್ಕೆ ಸರಸ್ವತಿಪುರಂ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ.

ADVERTISEMENT

ನೆಲಮಟ್ಟದಿಂದ ಸುಮಾರು 25 ಅಡಿ ಆಳವಿರುವ ಕೊಳದಲ್ಲಿ ಅಗ್ನಿಶಾಮಕ ಸಿಬ್ಬಂದಿ ಸುಮಾರು ಒಂದೂವರೆ ಗಂಟೆ ಕಾರ್ಯಾಚರಣೆ ನಡೆಸಿದರು. ರಾತ್ರಿ 8.30ರ ಸುಮಾರಿಗೆ ಮೃತದೇಹ ಪತ್ತೆಯಾಗಿದ್ದು, ಕೆ.ಆರ್‌.ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ಈ ಸಂಬಂಧ ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲಿಗೆ ಸಿಲುಕಿ ಮಹಿಳೆ ಸಾವು: ಮೈಸೂರು–ನಂಜನಗೂಡು ಮಾರ್ಗದ ತಾಂಡವಪುರ ರೈಲು ನಿಲ್ದಾಣದ ಬಳಿ ಹಳಿ ದಾಟುತ್ತಿದ್ದ ವೃದ್ಧೆ ಶನಿವಾರ ಸಂಜೆ ರೈಲಿಗೆ ಸಿಲುಕಿ ಮೃತಪಟ್ಟಿದ್ದಾರೆ. ವೃದ್ಧೆಯ ವಯಸ್ಸು ಸುಮಾರು 75 ವರ್ಷ . ವಾರಸುದಾರರು ರೈಲ್ವೆ ಪೊಲೀಸರನ್ನು ಸಂಪರ್ಕಿಸುವಂತೆ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.