ADVERTISEMENT

‘ಜನಪರ ಕಾಳಜಿಗೆ ಚರ್ಚೆ,ಅಧ್ಯಯನ ಅಗತ್ಯ’ 

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:19 IST
Last Updated 23 ಮಾರ್ಚ್ 2017, 6:19 IST

ಮೈಸೂರು:  ಮಕ್ಕಳಲ್ಲಿ ಜನಪರ ಕಾಳಜಿ ಮೂಡಿಸಲು ಸಿನಿಮಾ, ಚರ್ಚೆ, ಸಾಹಿತ್ಯ ಅಧ್ಯಯನ ಮುಖ್ಯ ಎಂದು ಲೇಖಕಿ ಪಿ.ಭಾರತಿದೇವಿ ಹೇಳಿದರು.

ಮೈಸೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಎಂಎಂಸಿ ಅಂಡ್‌ ಆರ್‌ಐ), ಚಲನ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ನಗರದ ಜೆ.ಕೆ.ಮೈದಾನದ ಅಮೃತಮಹೋತ್ಸವ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ‘ವೇವ್-2017’ ಚಲನಚಿತ್ರೋತ್ಸವ ಉದ್ಘಾಟಿಸಿ ಮಾತನಾಡಿದರು.

ದೇಶಪ್ರೇಮ, ದೇಶದ್ರೋಹ, ಧರ್ಮ, ಸಂಸ್ಕೃತಿ ಎಂದೆಲ್ಲ ಸಿದ್ಧಾಂತಗಳನ್ನು ಹಲವು ಬಾರಿ ಹೇರುತ್ತಾರೆ. ಇದೆಲ್ಲದರ ಹೊರತಾಗಿ ತೆರೆದ ಕಣ್ಣಿನಲ್ಲಿ ವಾಸ್ತವವನ್ನು ಅವಲೋಕಿಸಿದಾಗ ಸಮಾಜದ ಬಗ್ಗೆ ಆರೋಗ್ಯಕರ ತಿಳಿವಳಿಕೆ ಮೂಡಲು ಸಾಧ್ಯ ಎಂದು ಹೇಳಿದರು.

‘ಮೋಟಾರ್ ಸೈಕಲ್ ಡೈರೀಸ್’ ಸಿನಿಮಾವು ಸಾಮಾಜಿಕ ವಾಸ್ತವ ಪ್ರತಿಬಿಂಬವಾಗಿದೆ. ಇರಾನ್‌ನಲ್ಲಿ ಸಿನಿಮಾ ಪ್ರತಿಭಟನೆಯ ಮಾಧ್ಯಮವಾಗಿಯೂ ರೂಪುಗೊಳ್ಳುತ್ತಿದೆ ಎಂದು ತಿಳಿಸಿದರು.

ಎಂಎಂಸಿ ಮತ್ತು ಆರ್ಐ ನಿರ್ದೇಶಕ ಡಾ.ಬಿ.ಕೃಷ್ಣಮೂರ್ತಿ ಮಾತನಾಡಿ, ಸಿನಿಮಾ ಪ್ರಭಾವಶಾಲಿ ಮಾಧ್ಯಮವಾಗಿದೆ. ವಾಣಿಜ್ಯ ಸಿನಿಮಾ ಮತ್ತು ಕಲಾತ್ಮಕ ಸಿನಿಮಾ ಎಂದು ಎರಡು ಬಗೆ ಇವೆ. ವಾಣಿಜ್ಯ ಸಿನಿಮಾದಲ್ಲಿ ಮನರಂಜನೆಗೆ ಪ್ರಾಮುಖ್ಯತೆ ನೀಡಲಾಗುತ್ತದೆ. ಕಲಾತ್ಮಕ ಸಿನಿಮಾ ಸಿನಿಮಾದಲ್ಲಿ ಸಾಮಾಜಿಕ ಕಳಕಳಿ, ಸಮಕಾಲೀನ ಸಮಸ್ಯೆಗಳನ್ನು ಬಿಂಬಿಸಲಾಗುತ್ತದೆ ಎಂದು ಹೇಳಿದರು.

ವಾಲ್ಟರ್ ಸ್ಯಾಲಿಸ್ ನಿರ್ದೇಶನದ ‘ಮೋಟಾರ್ ಸೈಕಲ್ ಡೈರೀಸ್’ ಚಲನಚಿತ್ರ ಪ್ರದರ್ಶನಗೊಂಡಿತು. ಚಲನಚಿತ್ರೋತ್ಸವವು 24ರವರೆಗೆ ನಡೆಯಲಿದೆ.
ಎಂಎಂಸಿ ಮತ್ತು ಆರ್ಐ ಮುಖ್ಯ ಆಡಳಿತಾಧಿಕಾರಿ ಬಿ.ಜಿ.ಇಂದಿರಮ್ಮ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.