ಪಿರಿಯಾಪಟ್ಟಣ: ತಂಬಾಕು ರೈತರು ಸಾಲ ತೀರಿಸಲು ಸಾಧ್ಯವಿಲ್ಲದ ಪರಿಸ್ಥಿತಿಯಲ್ಲಿದ್ದು, ಸಂಘಟಿತ ಹೋರಾಟ ನಡೆಸಬೇಕು ಎಂದು ಪರಿಸರ ಹೋರಾಟಗಾರ ಕೆ.ಎನ್.ಸೋಮಶೇಖರ್ ಸಲಹೆ ನೀಡಿದರು. ತಾಲ್ಲೂಕಿನ ಬೆಟ್ಟದಪುರದ ಬಯಲು ರಂಗಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ರೈತ ಜಾಗೃತಿ ರಥಯಾತ್ರೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿವರ್ಷ ಸುಮಾರು ₹ 30 ಸಾವಿರ ಕೋಟಿ ವಹಿವಾಟು ನಡೆಸುವ ತಂಬಾಕು ಖರೀದಿದಾರ ಕಂಪೆನಿಗಳು ಸರ್ಕಾರಕ್ಕೆ ಸಾವಿರಾರು ಕೋಟಿ ರೂಪಾಯಿ ತೆರಿಗೆ ನೀಡುತ್ತಿವೆ. ಆದರೆ, ರೈತರಿಗೆ ₹ 1,200 ಕೋಟಿ ಮಾತ್ರ ತಲುಪುತ್ತಿದೆ. ಉಳಿದ ಹಣ ಕಂಪೆನಿಗಳ ಪಾಲಾಗುತ್ತಿದೆ ಎಂದು ಆರೋಪಿಸಿದರು.
ರೈತರಲ್ಲಿ ಚೈತನ್ಯ ಮೂಡಿಸಲು ಹಾಗೂ ಸರ್ಕಾರಗಳ ಕಣ್ಣು ತೆರೆಸಲು ತಾಲ್ಲೂಕಿನ 240 ಗ್ರಾಮಕ್ಕೂ ರೈತ ಯಾತ್ರೆಯೊಂದಿಗೆ ತೆರಳಿ, ಮುಕ್ತವಾಗಿ ಚರ್ಚಿಸಲಾಗುವುದು. ಸಮಸ್ಯೆ ಮತ್ತು ವಾಸ್ತವ ಅರಿಯಲು ಈ ಯಾತ್ರೆ ಕೈಗೊಂಡಿದ್ದು, ರೈತರು ಸಹಕಾರ ನೀಡ ಬೇಕು ಎಂದು ಮನವಿ ಮಾಡಿದರು.
ಸಮಾರಂಭ ಉದ್ಘಾಟಿಸಿದ ಮಾಜಿ ಶಾಸಕ ಎಚ್.ಸಿ.ಬಸವರಾಜು, ತಾಲ್ಲೂಕಿನಲ್ಲಿ 1967ರಿಂದಲೂ ತಂಬಾಕು ಬೆಳೆಯುತ್ತಿದ್ದು, ರೈತರ ಹಿತ ಕಾಪಾಡಲು 1981ರಲ್ಲಿ ತಂಬಾಕು ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಆದರೆ, ಅಂದಿನಿಂದಲೂ ವೈಜ್ಞಾನಿಕ ಬೆಲೆ ನಿಗದಿಯಾಗದಿರುವುದು ಬೇಸರದ ಸಂಗತಿ. ರೈತರು ಸಾಲ ತೀರಿಸಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ತಂಬಾಕಿಗೆ ₹ 250 ಬೆಲೆ ನಿಗದಿ ಮಾಡಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ ಅವರು, ಬೇಡಿಕೆಗಳು ಈಡೇರಬೇಕಾದರೆ ಒಗ್ಗಟ್ಟಿನ ಮೂಲಕ ಹೋರಾಟ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರಗತಿಪರ ಮಹಿಳೆ ಪದ್ಮಮ್ಮ ಮತ್ತು ಹೈನುಗಾರಿಕೆ ಮಾಡುತ್ತಿರುವ ಶೋಭಾ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಎನ್.ಜಿ.ರಾಮಚಂದ್ರ, ದೇವರಾಜೇಗೌಡ, ಎಪಿಎಂಸಿ ಸದಸ್ಯ ನರಸಿಂಹೇಗೌಡ, ಗ್ರಾ.ಪಂ ಸದಸ್ಯ ಜಯರಾಮೇಗೌಡ ಇತರರು ಹಾಜರಿದ್ದರು.
* *
ಕೇಂದ್ರ ಸರ್ಕಾರ ತಂಬಾಕಿಗೆ ನಿಖರವಾದ ಬೆಲೆ ನೀಡದೆ ರೈತರ ಶೋಷಣೆ ಮಾಡುತ್ತಿದೆ
ಎಚ್.ಸಿ.ಬಸವರಾಜು, ಶಾಸಕ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.