ADVERTISEMENT

ಪ್ರತ್ಯೇಕ ರಾಜ್ಯದ ವಿಷ ಕಕ್ಕುವುದು ಬೇಡ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:54 IST
Last Updated 14 ಮಾರ್ಚ್ 2017, 5:54 IST
ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಜೆ.ಜಿ.ನಂದೀಶ್, ಎಂ.ಎನ್.ಗೋಪಾಲಕೃಷ್ಣ, ಪಾಲಹಳ್ಳಿ ರಾಮಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು
ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಹೋರಾಟಗಾರರಾದ ಮೂಗೂರು ನಂಜುಂಡಸ್ವಾಮಿ, ಜೆ.ಜಿ.ನಂದೀಶ್, ಎಂ.ಎನ್.ಗೋಪಾಲಕೃಷ್ಣ, ಪಾಲಹಳ್ಳಿ ರಾಮಕೃಷ್ಣಯ್ಯ ಅವರನ್ನು ಸನ್ಮಾನಿಸಲಾಯಿತು   

ಮೈಸೂರು: ‘ಉತ್ತರ ಕರ್ನಾಟಕದವರು ಪ್ರತ್ಯೇಕ ರಾಜ್ಯವೆಂಬ ವಿಷ ಕಕ್ಕುವುದು ಬೇಡ’ ಎಂದು ಸಾಹಿತಿ ಅರವಿಂದ ಮಾಲಗತ್ತಿ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸೋಮವಾರ ಇಲ್ಲಿನ ಕಸಾಪ ಕಚೇರಿಯಲ್ಲಿ ನಡೆದ ‘ಕರ್ನಾಟಕ ಏಕೀಕರಣದ ವಜ್ರಮಹೋತ್ಸವ ಅಂಗವಾಗಿ ಏರ್ಪಡಿಸಿದ್ದ ಉಪನ್ಯಾಸ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಉತ್ತರ ಕರ್ನಾಟಕದವರು ಅಭಿವೃದ್ಧಿ ವಿಚಾರದಲ್ಲಿ ಬುಸುಗುಡಬೇಕು. ಅದನ್ನು ಒಪ್ಪಬಹುದು ಮತ್ತು ಉತ್ತರ ಕರ್ನಾಟಕ ಸರ್ವಾಂಗೀಣವಾಗಿ ಅಭಿವೃ ದ್ಧಿಯಾಗಲೇಬೇಕು. ಆದರೆ, ಇದೇ ವಿಚಾರವನ್ನು ಮುಂದಿಟ್ಟು ಪ್ರತ್ಯೇಕ ರಾಜ್ಯ ಬೇಕು’ ಎಂದು ಆಗ್ರಹಿಸುವುದು ವಿಷ ಕಕ್ಕುವುದಕ್ಕೆ ಸಮ’ ಎಂದು ಅವರು ಅಭಿಪ್ರಾಯಪಟ್ಟರು.

ADVERTISEMENT

‘ಕರ್ನಾಟಕ ಏಕೀಕರಣ ಹೋರಾಟದಲ್ಲಿ ಮೈಸೂರು ಭಾಗದಿಂದ ಬೌದ್ಧಿಕ ಬೆಂಬಲ ಸಿಕ್ಕಿತು. ಆದರೆ, ಭರಪೂರ ಭೌತಿಕ ಬೆಂಬಲ ದೊರಕಿದ್ದು ಉತ್ತರ ಕರ್ನಾಟಕ ಭಾಗದಿಂದಲೇ ಎಂಬುದನ್ನು ಮರೆಯಬಾರದು’ ಎಂದು ಹೇಳಿದರು.

‘ಇವನು ಉತ್ತರ ಕರ್ನಾಟಕ, ಅವನು ದಕ್ಷಿಣ ಕರ್ನಾಟಕ ಎಂಬ ಭೇದಭಾವ ಇನ್ನೂ ಜೀವಂತವಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನಗಳಲ್ಲೂ ಆಯಾ ಭಾಗದ ಸಾಹಿತಿಗಳನ್ನೇ ಅಧ್ಯಕ್ಷರ ನ್ನಾಗಿ ನೇಮಕ ಮಾಡಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಾಹಿತ್ಯ ಸಮ್ಮೇಳನಗಳು ತೆಗೆದುಕೊಂಡಿರುವ ನಿರ್ಣಯಗಳನ್ನು ಅನುಷ್ಠಾನಕ್ಕೆ ತರಲು ಪ್ರತ್ಯೇಕ ಸಚಿವಾಲಯದ ಅಗತ್ಯ ಇದೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಹೆಚ್ಚು ಅಧಿಕಾರ ಇಲ್ಲದೆ ಇರುವುದರಿಂದ ನಿರ್ಣಯಗಳು ಹಾಗೆಯೇ ಉಳಿದುಕೊಂಡಿವೆ ಎಂದು ಅವರು ವಿಶ್ಲೇಷಿಸಿದರು.

ಹೋರಾಟಗಾರರಾದ ಮೈ.ನಾ. ಗೋಪಾಲಕೃಷ್ಣ, ಮೂಗೂರು ನಂಜುಂಡಸ್ವಾಮಿ, ಬೋ.ಗ.ನಂದೀಶ್, ಪಾಲಹಳ್ಳಿ ರಾಮಕೃಷ್ಣ ಅವರನ್ನು ಸನ್ಮಾನಿಸಲಾಯಿತು.
ವಿದ್ವಾಂಸ ಕಾಳೇಗೌಡ ನಾಗವಾರ, ಲೇಖಕ ಡಾ.ಹಾಲತಿ ಸೋಮಶೇಖರ್, ಜಿಲ್ಲಾ ಕಸಾಪ ಅಧ್ಯಕ್ಷ ವೈ.ಡಿ.ರಾಜಣ್ಣ, ಪ್ರಧಾನ ಕಾರ್ಯದರ್ಶಿ ಜಯಪ್ಪ ಹೊನ್ನಾಳಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.