ಮೈಸೂರು: ರಿಂಗ್ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಅಡ್ಡಗಟ್ಟಿ ದರೋಡೆಗೆ ಹೊಂಚು ಹಾಕಿದ ಆರೋಪ ಸಾಬೀತಾಗಿದ್ದು, ಬಾಂಗ್ಲಾದೇಶದ ಪ್ರಜೆ ಸೇರಿ ಐವರಿಗೆ ಮೂರನೇ ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಬಾಂಗ್ಲಾದೇಶದ ನಿವಾಸಿ ಮಹಮದ್ ಇಲಿಯಾಸ್ (45), ಪಶ್ಚಿಮ ಬಂಗಾಳದ ಶಾನ್ ಪುಕೂರ್ ಕಾಲುಖಾ (24), ಮಿಥುನ್ ತೂರಾಬ್ದಾರ್ (22), ಜೂಲಿ ರೂಬೆಲ್ (28), ದೆಹಲಿಯ ಪಾಕಿ (25) ಶಿಕ್ಷೆಗೆ ಗುರಿಯಾದವರು. ದಿಲ್ವರ್ ಖಾನ್, ಸಾಬಿರ್ ಖಾನ್ ಹಾಗೂ ಸಿಕಂದರ್ ಎಂಬುವರನ್ನು ದೋಷಮುಕ್ತಗೊಳಿಸಿದೆ.
2016ರ ಆ.20ರಂದು ಉನ್ನತಿನಗರದ ರೈಲ್ವೆ ಕೆಳಸೇತುವೆ ಬಳಿ ಮಾರಕಾಸ್ತ್ರಗಳನ್ನು ಹಿಡಿದು ದರೋಡೆಗೆ ಹೊಂಚು ಹಾಕುತ್ತಿದ್ದ ಎಂಟು ಆರೋಪಿಗಳು ನರಸಿಂಹರಾಜ ಠಾಣೆಯ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ರಿಂಗ್ ರಸ್ತೆಯಲ್ಲಿ ಸಂಚರಿಸುವ ವಾಹನಗಳ ದರೋಡೆಗೆ ಹೊಂಚು ಹಾಕಿದ್ದು ತನಿಖೆ ವೇಳೆ ಸಾಬೀತಾಗಿತ್ತು. ಈ ಸಂಬಂಧ ಇನ್ಸ್ಪೆಕ್ಟರ್ ಟಿ.ಅಶೋಕಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಸ್.ಸುಧೀಂದ್ರನಾಥ್ ಸೋಮವಾರ ಆದೇಶ ನೀಡಿದ್ದಾರೆ. ಸರ್ಕಾರದ ಪರ ಪಬ್ಲಿಕ್ ಪ್ರಾಸಿಕ್ಯೂಟರ್ ವಾಸಂತಿ ಎಂ.ಅಂಗಡಿ ವಾದ ಮಂಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.