ADVERTISEMENT

ಭಾಷೆಯ ಮೇಲೆ ಜಾಗತೀಕರಣದ ಪೆಟ್ಟು

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 11:29 IST
Last Updated 29 ಆಗಸ್ಟ್ 2016, 11:29 IST

ಮೈಸೂರು: ಜಾಗತೀಕರಣದ ಮೊದಲ ಪೆಟ್ಟು ಬಿದ್ದದ್ದು ಭಾಷೆ ಹಾಗೂ ಸಂಸ್ಕೃತಿಯ ಮೇಲೆ ಎಂದು ಹೋರಾಟಗಾರ್ತಿ ಸುನಂದಾ ಜಯರಾಂ ವಿಶ್ಲೇಷಿಸಿದರು. ಕರ್ನಾಟಕ ಕಾವಲುಪಡೆ ವತಿಯಿಂದ ಇಲ್ಲಿನ ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ‘ಕನ್ನಡ ಜಾಗೃತಿ ಸಮಾವೇಶ, ನಾಡೋಜ ಡಾ.ದೇಜಗೌ ನೆನಪು, ಕನ್ನಡ ಚೇತನ ಪ್ರತಿಭಾ ಪುರಸ್ಕಾರ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಈಗಲಾದರೂ ಎಚ್ಚೆತ್ತುಕೊಂಡು ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸುವ ಕೆಲಸ ಮಾಡಬೇಕಿದೆ ಎಂದರು. ಕಾರ್ಯಕ್ರಮ ಉದ್ಘಾಟಿಸಿದ ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪನಿರ್ದೇಶಕಿ ಡಾ.ಧರಣಿದೇವಿ ಮಾಲಗತ್ತಿ,  ಕನ್ನಡದಲ್ಲಿಯೇ ಎಲ್ಲವನ್ನೂ ಭಾವಿಸಿದರೆ ಭಾಷೆ ಉಳಿಯುತ್ತದೆ ಎಂದು ತಿಳಿಸಿದರು.

ಆಶೀರ್ವಚನ ನೀಡಿದ ಆದಿಚುಂಚನಗಿರಿ ಕ್ಷೇತ್ರದ ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಪ್ರತಿಭಾ ಪುರಸ್ಕಾರ ಪಡೆದ ವಿದ್ಯಾರ್ಥಿಗಳು ಕೇವಲ ಅಷ್ಟಕ್ಕೆ ಸೀಮಿತರಾಗದೇ ಇನ್ನಷ್ಟು ಸಾಧನೆಯೆಡೆಗೆ ತುಡಿಯಬೇಕು ಅವರು ಎಂದು ಕರೆ ನೀಡಿದರು.‌‌ ಶಾಸಕ ಜಿ.ಟಿ.ದೇವೇಗೌಡ ಮಾತನಾಡಿದರು.

ಎಸ್ಸೆಸ್ಸೆಲ್ಸಿಯಲ್ಲಿ ಕನ್ನಡ ಭಾಷೆಯಲ್ಲಿ 125ಕ್ಕೆ 125 ಅಂಕಗಳನ್ನು ಪಡೆದ 450 ಮಂದಿ ವಿದ್ಯಾರ್ಥಿಗಳಿಗೆ, ಪಿಯುನಲ್ಲಿ ಕನ್ನಡದಲ್ಲಿ 95ರಿಂದ 100 ಅಂಕ ಪಡೆದ 130 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಎಚ್.ಎಸ್. ಮುದ್ದೇಗೌಡ, ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ.ಕೆ.ಎಸ್.ಸದಾನಂದ, ಡಾ.ದೇಜಗೌ ಜ್ಞಾನವಾಹಿನಿ ಅಕಾಡೆಮಿಯ ಅಧ್ಯಕ್ಷ ಪ್ರೊ.ಜೆ. ಶಶಿಧರಪ್ರಸಾದ್, ವಿಜಯಚೇತನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಎಚ್.ಪಿ. ಮೋಹನಕುಮಾರ್, ಕರ್ನಾಟಕ ಕಾವಲುಪಡೆಯ ಅಧ್ಯಕ್ಷ ಎಂ. ಮೋಹನ್‌ಕುಮಾರ್‌ಗೌಡ, ಸಾಂಸ್ಕೃತಿಕ ಘಟಕದ ಅಧ್ಯಕ್ಷ ಟಿ.ಸತೀಶ್ ಜವರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.