ADVERTISEMENT

‘ಮೂರೂ ಪಕ್ಷಗಳು ಕಲುಷಿತ’

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2017, 5:37 IST
Last Updated 25 ಡಿಸೆಂಬರ್ 2017, 5:37 IST

ಕೆ.ಆರ್.ನಗರ: ‘ಬೀಡಿ, ಸಿಗರೇಟ್‌ಗೂ ದರ ನಿಗದಿಯಾಗಿದೆ. ಆದರೆ, ರೈತರ ಯಾವ ಬೆಳೆಗೂ ಬೆಲೆ ನಿಗದಿಯಾಗದೇ ಇರುವುದು ನಾಚಿಕೆಗೇಡಿನ ಸಂಗತಿ’ ಎಂದು ಸ್ವರಾಜ್ ಇಂಡಿಯಾ ಪಕ್ಷ ಜಿಲ್ಲಾ (ಗ್ರಾಮಾಂತರ) ಘಟಕದ ಸಂಚಾಲಕ ಎಚ್.ಎ.ನಂಜುಂಡಸ್ವಾಮಿ ಹೇಳಿದರು. ಪಟ್ಟಣದಲ್ಲಿ ಭಾನುವಾರ ಸ್ವರಾಜ್ ಇಂಡಿಯಾ ಪಕ್ಷದ ತಾಲ್ಲೂಕು ಘಟಕ ಉದ್ಘಾಟಿಸಿ ಅವರು ಮಾತನಾಡಿದರು.

‘ಕಾಂಗ್ರೆಸ್ ಸರಿ ಇಲ್ಲ ಎಂದು ಬಿಜೆಪಿಗೆ ಹೋಗುವುದು, ಬಿಜೆಪಿ ಸರಿ ಇಲ್ಲ ಎಂದು ಜೆಡಿಎಸ್‌ಗೆ ಹೋಗುವುದು, ಜೆಡಿಎಸ್ ಸರಿ ಇಲ್ಲ ಎಂದು ಮತ್ತೆ ಕಾಂಗ್ರೆಸ್‌ಗೆ ಮರಳುವುದು. ಹೀಗೆ ಇಲ್ಲಿರುವ ವರೇ ಅಲ್ಲಿ, ಅಲ್ಲಿ ಇರುವವರೇ ಎಲ್ಲೆಡೆ ಎನ್ನುಂತಾಗಿದೆ. ಇದರಿಂದ ಎಲ್ಲೂ ಉತ್ತಮರಿಲ್ಲ. ಒಡೆದು ಹೋಳು ಮಾಡಿದರೆ ಮೂರು ಪಕ್ಷವೂ ಒಂದೇ ಎನ್ನುವಂತಾಗಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳೂ ಕಲುಷಿತಗೊಂಡಿವೆ’ ಎಂದು ಟೀಕಿಸಿದರು.

‘ಸುಪ್ರೀಂಕೋರ್ಟ್ ತೀರ್ಪು ಬರಲಿ, ಬರದೇ ಇರಲಿ, 2018ರ ಅಕ್ಟೋಬರ್‌ನಲ್ಲಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ಮಾಡೇ ಮಾಡುತ್ತೇವೆ ಎಂದು ಉಡುಪಿಯಲ್ಲಿ ಈಚೆಗೆ ನಡೆದ ಧರ್ಮ ಸಂಸತ್‌ನಲ್ಲಿ ಹೇಳುತ್ತಾರೆ. 2018ರ ಅಕ್ಟೋಬರ್‌ನಲ್ಲಿ ಏಕೆ?. ಭೂಮಿಪೂಜೆ ಮಾಡುವುದಾದರೆ ಇಂದೇ ಮಾಡಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಇದೊಂದು ಚುನಾವಣಾ ತಂತ್ರ ವಾಗಿದೆ. ರಾಮಮಂದಿರ ನಿರ್ಮಾಣ ಮಾಡುವುದಾಗಿ ಹೇಳಿಕೆ ನೀಡಿ ಅಮಾಯಕರ ಬಲಿ ಕೊಡಲಾಗು ತ್ತದೆ. ಚುನಾವಣೆ ಮುಗಿಯುತ್ತಿದ್ದಂತೆ ಅದರ ಬಗ್ಗೆ ಪ್ರಸ್ತಾಪ ಆಗುವುದೇ ಇಲ್ಲ’ ಎಂದು ಆರೋಪಿಸಿದರು. ‘ಸರ್ವೋದಯ ಕರ್ನಾಟಕ ಪಕ್ಷ ಸ್ವರಾಜ್ ಇಂಡಿಯಾ ಪಕ್ಷದಲ್ಲಿ ವಿಲಿನಗೊಳಿಸಲಾ ಗಿದೆ. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್ ಈ ಮೂರು ಪಕ್ಷಗಳಿಂದ ಸ್ವರಾಜ್ ಇಂಡಿಯಾ ಭಿನ್ನವಾಗಿದೆ’ ಎಂದರು.

ಪಕ್ಷದ ರಾಜ್ಯ ಘಟಕದ ಸದಸ್ಯ ಅಭಿರುಚಿ ಗಣೇಶ್, ಖಜಾಂಚಿ ಸರಗೂರು ನಟರಾಜ್, ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕುಮಾರ್, ಹಸಿರುಕ್ರಾಂತಿ ಹೋರಾಟಗಾರ್ತಿ ಭಾನು ಮೋಹನ, ಕೃಷಿ ಇಲಾಖೆ ನಿವೃತ್ತ ನೌಕರ ಚಂದ್ರೇಗೌಡ, ಕರುಣಾಕರ್, ಲೋಕೇಶ್ ರಾಜೇ ಅರಸ್, ಮೂಡಲಬೀಡು ಮಹದೇವ್, ಗರುಡಗಂಬ ಸ್ವಾಮಿ ಮಾತನಾಡಿದರು. ಮುಖಂಡರಾದ ಗಂಧನಹಳ್ಳಿ ಹೇಮಂತ್, ಶಾವಂದಪ್ಪ, ಡಿ.ಕೆ.ಕೊಪ್ಪಲು ರಾಜಯ್ಯ, ಎಂ.ಲೋಕೇಶ್, ತಿಮ್ಮಶೆಟ್ಟಿ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.