ADVERTISEMENT

ಲಕ್ಷ್ಮಣತೀರ್ಥ ನದಿ ಉಳಿವಿಗೆ ಗ್ರಾಮಸ್ಥರ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:18 IST
Last Updated 23 ಮಾರ್ಚ್ 2017, 6:18 IST

ಹುಣಸೂರು: ತಾಲ್ಲೂಕಿನ ಲಕ್ಷ್ಮಣತೀರ್ಥ ನದಿ ಪಾತ್ರದ 80 ಕಿ.ಮೀ. ಸಂಪೂರ್ಣ ಅರಣ್ಯಕರಣಗೊಳಿಸುವ ಮೂಲಕ ನದಿ ಮಾಲಿನ್ಯ ನಿಯಂತ್ರಿಸಲು ಅರಣ್ಯ ಇಲಾಖೆ ಸಿದ್ಧವಿದೆ ಎಂದು ಪ್ರಾದೇಶಿಕ ಅರಣ್ಯ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಬಾಲಚಂದ್ರ ಹೇಳಿದರು.

ನಗರದ ಪ್ರಾದೇಶಿಕ ಅರಣ್ಯ ಇಲಾಖೆ ಕಚೇರಿಯಲ್ಲಿ ಬುಧವಾರ ನಡೆದ ಪರಿಸರ ಹಾಗೂ ಲಕ್ಷ್ಮಣತೀರ್ಥ ಉಳಿಸಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ನದಿ ಪಾತ್ರದಲ್ಲಿ ಸಮಾರು 100 ಗ್ರಾಮಗಳಿವೆ. ಈ ಗ್ರಾಮಗಳ ರೈತರ ಸಹಕಾರದೊಂದಿಗೆ ನದಿ ತಟದಲ್ಲಿ ಸಸಿ ನೆಟ್ಟು ಬೆಳೆಸುವುದರೊಂದಿಗೆ ನದಿ ಸ್ವಚ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲು ಅರಣ್ಯ ಇಲಾಖೆ ಸಿದ್ಧ ಇದೆ ಎಂದು ಹೇಳಿದರು.

ಡೀಡ್ ಸಂಸ್ಥೆ ನಿರ್ದೇಶಕ ಶ್ರೀಕಾಂತ್‌ ಮಾತನಾಡಿ, ಲಕ್ಷ್ಮಣತೀರ್ಥ ನದಿಗೆ ನೀರು ಸೇರುವ 21 ಜಲಮೂಲಗಳಿದ್ದು, ಇವು ಮರಳು ಮಾಫಿಯಾದಿಂದ ಸಂಪೂರ್ಣ ಹಾಳಾಗಿವೆ. ಅರಣ್ಯ ಇಲಾಖೆಗೆ ಸೇರಿರುವ ಲಕ್ಷ್ಮಣತೀರ್ಥ ನದಿ ಮರಳು ಮಾಫಿಯಾದಿಂದ ಮುಕ್ತಗೊ ಳಿಸಬೇಕು ಎಂದು ಒತ್ತಾಯಿಸಿದರು.

ಜಲ ಮೂಲ ಸಂರಕ್ಷಿಸುವ ದಿಕ್ಕಿನಲ್ಲಿ ಜಲಾನಯನ ಇಲಾಖೆ ಅಧಿಕಾರಿಗಳಿಗೆ ಜವಾಬ್ದಾರಿ ನೀಡಬೇಕು. ನದಿ ಪಾತ್ರದಲ್ಲಿ ಜಲ ಮೂಲ ಒತ್ತುವರಿ ತೆರವುಗೊಳಿಸ ಬೇಕಾಗಿದೆ. ನದಿ ಪಾತ್ರದಲ್ಲಿನ ಗ್ರಾಮಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ ಅವರ ಸಹಕಾರದೊಂದಿಗೆ ನದಿ ಪಾತ್ರ ಸ್ವಚ್ಛಗೊಳಿಸುವುದರಿಂದ ನದಿ ಸಂರಕ್ಷಣೆಗೆ ಒತ್ತು ನೀಡಬೇಕು ಎಂದು ಆಗ್ರಹಿಸಿದರು.

ಮುಂದಿನ ಸಭೆಗೆ ಜಿಲ್ಲಾಧಿಕಾರಿ ಅಥವಾ ಅವರ ಪ್ರತಿನಿಧಿ ಆಹ್ವಾನಿಸುವ ಮೂಲಕ ನದಿ ಕುರಿತು ಅವರ ಗಮನ ಸೆಳೆಯುವುದು ಹಾಗೂ ಸ್ಥಳಿಯ ಅಧಿಕಾರಿಗಳಿಗೆ ಆಹ್ವಾನ ನೀಡಲು ತೀರ್ಮಾನಿಸಲಾಯಿತು. ಸಭೆಯಲ್ಲಿ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹೊಸೂರು ಕೃಷ್ಣಕುಮಾರ್‌, ಪುರುಷೋತ್ತಮ್, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.