ಮೈಸೂರು: ಕಾಂಗ್ರೆಸ್ನಿಂದ ಟಿಕೆಟ್ ಕೈತಪ್ಪಿರುವ ಸಿರಗುಪ್ಪ ಶಾಸಕ ಬಿ.ಎಂ.ನಾಗರಾಜು ಹಾಗೂ ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಅವರ ನೂರಾರು ಬೆಂಬಲಿಗರು ಮಂಗಳವಾರ ರಾತ್ರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿವಾಸದ ಎದುರು ಬೀಡುಬಿಟ್ಟರು.
30ಕ್ಕೂ ಹೆಚ್ಚು ಟೆಂಪೊ ಹಾಗೂ 20ಕ್ಕೂ ಹೆಚ್ಚು ಕಾರುಗಳಲ್ಲಿ ಬಂದಿರುವ ಕಾರ್ಯಕರ್ತರು ಮುಖ್ಯಮಂತ್ರಿಯನ್ನು ಮಂಗಳವಾರ ಬೆಳಿಗ್ಗೆಯೇ ಭೇಟಿ ಮಾಡಿದರು. ಟಿಕೆಟ್ ಖಚಿತಪಡಿಸುವವರೆಗೂ ಸ್ಥಳದಿಂದ ಕದಲುವುದಿಲ್ಲವೆಂದು ರಾತ್ರಿ ಮನೆಯ ಎದುರೇ ಮಲಗಲು ಸಜ್ಜಾದರು.
ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್ ಅವರ ಬೆಂಬಲಿಗ ಬಿ.ಎಸ್.ಮೆಲ್ಲಹಳ್ಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿ, ‘ನಮ್ಮ ಶಾಸಕರು ಮತ್ತೆ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ. ಬೇರೆಯವರಿಗೆ ಟಿಕೆಟ್ ಕೊಡುವ ಅಗತ್ಯವೇನಿತ್ತು? ಟಿಕೆಟ್ ನೀಡುವವರೆಗೂ ನಾವು ಜಾಗದಿಂದ ಕದಲುವುದಿಲ್ಲ’ ಎಂದರು. ಹೆಚ್ಚಿನ ಕಾರ್ಯಕರ್ತರಿಗೆ ಅಗತ್ಯಕ್ಕೆ ತಕ್ಕಷ್ಟು ಊಟ ಸಿಗದೆ ಖಾಲಿ ಹೊಟ್ಟೆಯಲ್ಲಿಯೇ ಮಲಗಿದರು.
ಸುತ್ತೂರು ಮಠಕ್ಕೆ ಶಾಸಕರ ಭೇಟಿ: ಟಿಕೆಟ್ ವಂಚಿತರಾದ ಹಾನಗಲ್ ಶಾಸಕ ಮನೋಹರ ತಹಶೀಲ್ದಾರ್, ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹಾಗೂ ವಿಧಾನಸಭಾ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಸುತ್ತೂರು ಮಠಕ್ಕೆ ಭೇಟಿ ಮಾಡಿ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಜತೆ ಚರ್ಚಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಚಾರಕಾರ್ಯದ ನಡುವೆ ಸಂಜೆ 5ಕ್ಕೆ ಮಠಕ್ಕೆ ತೆರಳಿ ಟಿಕೆಟ್ ವಂಚಿತರ ಜತೆಗೆ ಮೂವತ್ತು ನಿಮಿಷ ಕಾಲ ಚರ್ಚಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.