ADVERTISEMENT

`ಹಾಡು ಹಳೆಯದಾದರೇನು...' ಕಾರ್ಯಕ್ರಮ ನಾಳೆ

​ಪ್ರಜಾವಾಣಿ ವಾರ್ತೆ
Published 29 ಜೂನ್ 2013, 6:41 IST
Last Updated 29 ಜೂನ್ 2013, 6:41 IST

ಮೈಸೂರು: ಸರಸ್ವತಿಪುರಂನ ಸುಗಮ ಸಂಗೀತ ಅಕಾಡೆಮಿ ಟ್ರಸ್ಟ್ ವತಿಯಿಂದ ಜೂನ್ 30ರಂದು ಭಾನುವಾರ ಸಂಜೆ 6 ಗಂಟೆಗೆ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ `ಹಾಡು ಹಳೆಯದಾದರೇನು...' ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ ಎಂದು ಗಾಯಕಿ ಎಚ್.ಆರ್. ಲೀಲಾವತಿ ತಿಳಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸುಗಮ ಸಂಗೀತಕ್ಕೆ ನಾಂದಿ ಹಾಡಿದ ಹಲವು ಕಲಾವಿದರು ಉತ್ತರ ಕರ್ನಾಟಕದವರು. `ನೋಡೆ ನೋಡೆ ರಮಣಿ...' ಎಂಬ ಕನ್ನಡದ ಭಾವಗೀತೆ ಮೊಟ್ಟಮೊದಲ ಬಾರಿಗೆ 1946ರಲ್ಲಿ ಪ್ರಸಾರವಾದದ್ದು ಮುಂಬೈ ಆಕಾಶವಾಣಿಯಲ್ಲಿ. ಭೀಮಸೇನ್ ಜೋಶಿ, ಪಿ.ಆರ್. ಭಾಗವತ್, ಬಾಳಪ್ಪ ಹುಕ್ಕೇರಿ, ಜಯವಂತಿ ಹಿರೇಬೆಟ್, ಉಮರ್ಜಿಬೀಳಗಿ ಮುಂತಾದ ಕಲಾವಿದರು ನೂತನ ರಾಗ ಸಂಯೋಜನೆಯೊಂದಿಗೆ ಸಂಗೀತದ ರಸದೌತಣ ನೀಡಿದರು. ಈ ನಿಟ್ಟಿನಲ್ಲಿ, ಉತ್ತರ ಕರ್ನಾಟಕದಲ್ಲಿ ಜನಪ್ರಿಯಗೊಂಡ ಮರಾಠಿ ಗೀತೆ, ಹಿಂದಿ ಭಜನೆ, ಹಿಂದಿ ಚಲನಚಿತ್ರಗೀತೆ ಹಾಗೂ ಕನ್ನಡ ಭಾವಗೀತೆಗಳನ್ನು ಮೈಸೂರಿನ ಕಲಾರಸಿಕರಿಗೆ ಪ್ರಸ್ತುತಪಡಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಹಳೆಯ ಹಾಡುಗಳಿಗೆ ಹೊಸ ಧ್ವನಿಗಳಾದ ಶಿವಮೊಗ್ಗದ ಸುರೇಖಾ ಹೆಗಡೆ, ಹಾಸನದ ಬನಮಾ, ಚನ್ನರಾಯಪಟ್ಟಣದ ಅಮೃತಾ, ಮೈಸೂರಿನ ನಿತಿನ್ ರಾಜರಾಮಶಾಸ್ತ್ರಿ ಅವರು ಒಟ್ಟು 22 ಹಾಡುಗಳನ್ನು ಹಾಡಲಿದ್ದಾರೆ. ನಿತಿನ್ ರಾಜಾರಾಮಶಾಸ್ತ್ರಿ ಅವರ ಹಾರ‌್ಮೋನಿಯಂ, ಹರೀಶ್ ಪಾಂಡು ಅವರ ಸ್ಯಾಕ್ಸೋಫೋನ್, ಪರಮೇಶ್ವರ ಹೆಗಡೆ ಅವರ ತಬಲ ಸಾಥ್ ನೀಡಲಿದೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶವಿದೆ. ಹೆಚ್ಚಿನ ಮಾಹಿತಿಗೆ ಮೊಬೈಲ್: 93792 52241ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.