ಪಿರಿಯಾಪಟ್ಟಣ: ಪಕ್ಷ ಮತ್ತು ಜಾತಿ ಭೇದ ಮರೆತು ತಾಲ್ಲೂಕಿನ ಅಭಿವೃದ್ಧಿಗೆ ಶ್ರಮಿಸಲಾಗಿದ್ದು, ಉಪಕಾರ ಪಡೆದ ಎಲ್ಲರೂ ಸ್ಮರಿಸುತ್ತಾರೆ ಎಂಬ ನಂಬಿಕೆಯಿಂದ ಈ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಶಾಸಕ ಕೆ.ವೆಂಕಟೇಶ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಸತ್ಯಗಾಲ, ರಾವಂದೂರು ಎಸ್.ಕೊಪ್ಪಲು, ಮಾಕನಹಳ್ಳಿ ಪಾಳ್ಯ, ಕಂಪಲಾಪುರ, ತೆಲಗಿನಕುಪ್ಪೆ, ಬೆಕ್ಕರೆ ಉತ್ತೇನಹಳ್ಳಿ, ಕೋಮಲಾಪುರ ಗ್ರಾಮಗಳಲ್ಲಿ ₹ 6.78 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶನಿವಾರ ನೆರವೇರಿಸಿ ಮಾತನಾಡಿದರು.
ಜಿಲ್ಲೆಯವರೆ ಮುಖ್ಯಮಂತ್ರಿ ಆಗಿದ್ದರಿಂದ ತಾಲ್ಲೂಕು ಜನತೆಯ ಬಹುನಿರೀಕ್ಷಿತ 150 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಅನುಮೋದನೆ ಪಡೆದು ಅನುದಾನ ಮಂಜೂರಾತಿ ಪಡೆಯಲು ಸಾಧ್ಯವಾಯಿತು. ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕೆರೆಗಳಿಗೆ ನೀರು ಹರಿಸಲಾಗುವುದು ಎಂದರು.
ಜೆಡಿಎಸ್ ಮುಖಂಡರು ಕೆಲಸ ಮಾಡದೇ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದು, ಅದಕ್ಕೆ ತಕ್ಕ ಉತ್ತರವನ್ನು ಅಭಿವೃದ್ಧಿ ಕೆಲಸ ಪಡೆದುಕೊಂಡವರು ನೀಡಲಿದ್ದಾರೆ ಎಂದರು.
ಶೇ 90ರಷ್ಟು ಎಸ್ಸಿ ಮತ್ತುಎಸ್ಟಿ ಕಾಲೊನಿಗಳಿಗೆ ರಸ್ತೆ, ಚರಂಡಿ ಇತರೆ ಮೂಲಸೌಕರ್ಯ ಒದಗಿಸಲಾಗಿದ್ದು, ಮುಂದಿನ ದಿನಗಳಲ್ಲಿ ಶೇ.100ರಷ್ಟು ಕೆಲಸ ಮಾಡಲಾಗುವುದು. ಹಳ್ಳಿಗಳಲ್ಲಿ ಪಕ್ಷ ರಾಜಕಾರಣ ಮರೆತು ಎಲ್ಲರೂ ಅಭಿವೃದ್ದಿ ಕಡೆ ಗಮನ ನೀಡುವ ಅಗತ್ಯವಿದೆ ಎಂದು ಹೇಳಿದರು.
ತಾಲ್ಲೂಕಿನ ಆಲನಹಳ್ಳಿ ಸಮೀಪದ ಮೂಡಲಕೊಪ್ಪಲು ಗ್ರಾಮದ ಸ್ನೇಹ ಜೀವಿ ಯುವಕರ ಸಂಘದ 10ಕ್ಕೂ ಹೆಚ್ಚು ಸದಸ್ಯರು ಜೆಡಿಎಸ್ ತೊರೆದು ಶಾಸಕರ ನೇತೃತ್ವದಲ್ಲಿ ಕಾಂಗೆಸ್ ಸೇರ್ಪಡೆಗೊಂಡರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಕೆ.ಆರ್.ನಿರೂಪಾ ರಾಜೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಕೌಸಲ್ಯಾ ಲೊಕೇಶ್, ಎಪಿಎಂಸಿ ಅಧ್ಯಕ್ಷ ಆರ್.ಟಿ.ರೇವಣ್ಣ, ಕೆಪಿಸಿಸಿ ಸದಸ್ಯ, ಡಿ.ಟಿ.ಸ್ವಾಮಿ, ಮುಖಂಡರಾದ ಬಿ.ಎಂ.ಕರೀಗೌಡ, ಲಕ್ಷ್ಮಣ್ಣೇಗೌಡ, ಮೋಹನ್ಕುಮಾರ್, ಜವರೇಗೌಡ, ಕೆ.ರಾಜು, ಕಾಳಪ್ಪ, ನಜೀರ್ ಸಾಬ್, ಗ್ರಾ.ಪಂ ಸದಸ್ಯರಾದ ಸುಧಾ, ಕವಿತಾ, ಕುಮಾರಿ, ಗ್ರಾಮದ ಮುಖಂಡರು ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.