ADVERTISEMENT

ಹಣ ದುರ್ಬಳಕೆ; ಮೂವರು ಅಮಾನತು

ಶ್ರೀಕಂಠೇಶ್ವರಸ್ವಾಮಿ ದೇಗುಲದಲ್ಲಿ ತುಲಾಭಾರ ಸೇವೆಯ ಹಣ ದುರುಪಯೋಗ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 4:20 IST
Last Updated 15 ಜನವರಿ 2018, 4:20 IST

ನಂಜನಗೂಡು: ತುಲಾಭಾರ ಸೇವೆಯ ಹಣ ದುರ್ಬಳಕೆ ಸಂಬಂಧ ಇಲ್ಲಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದ ಮೂವರು ಸಿಬ್ಬಂದಿಗೆ ಇಒ ಕುಮಾರಸ್ವಾಮಿ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ, ವಿಚಾರಣೆವರೆಗೆ ಅಮಾನತಿನಲ್ಲಿಡಲಾಗಿದೆ.

ತುಲಾಭಾರ ಸೇವೆ ವಿಭಾಗದ ಮೇಲ್ವಿಚಾರಕ ಅಭಿಷೇಕ್, ಗುಮಾಸ್ತೆ ಸುಭಾಷಿಣಿ ಹಾಗೂ ನಿವೃತ್ತ ಗುಮಾಸ್ತ ಶ್ರೀಕಂಠಸ್ವಾಮಿ ಅವರಿಗೆ ನೋಟಿಸ್ ನೀಡಲಾಗಿದೆ.

ದೇವಾಲಯದ ಆಡಳಿತ ಭವನದಲ್ಲಿ ಹತ್ತು ದಿನಗಳಿಂದ 2016–17ನೇ ಸಾಲಿನ ಲೆಕ್ಕಪತ್ರ ತಪಾಸಣೆ ನಡೆಸಲಾಗಿದೆ. ₹ 14.4 ಲಕ್ಷ ತುಲಾಭಾರ ಸೇವೆಯ ಹಣ ದುರುಪಯೋಗ ಆಗಿರುವ ಬಗ್ಗೆ ಅಧಿಕಾರಿಗಳು ವರದಿ ನೀಡಿದ್ದರು.

ADVERTISEMENT

‘ತುಲಾಭಾರ ಸೇವೆ ವಿಭಾಗದ ಮೇಲ್ವಿಚಾರಣೆ ನಡೆಸುತ್ತಿದ್ದ ಅಭಿಷೇಕ್ ನಾಲ್ಕು ವರ್ಷದಿಂದ ಈ ಬಾಬ್ತಿನಲ್ಲಿ ಹಣ ದುರ್ಬಳಕೆ ಮಾಡಿಕೊಂಡಿರುವ ಶಂಕೆ ಇದೆ. ಆದ್ದರಿಂದ ಮತ್ತೆ ಹಳೆ ಲೆಕ್ಕಪತ್ರ ತಪಾಸಣೆ ನಡೆಸುವಂತೆ ವರದಿ ನೀಡಲಾಗಿದೆ. ಇಲಾಖೆಯ ವಿಚಾರಣೆ ನಡೆಯುವವರೆಗೆ ಈ ಮೂವರನ್ನೂ ಅಮಾನತು ಮಾಡಲಾಗಿದೆ. ಜಿಲ್ಲಾಧಿ ಕಾರಿಗೆ ಪ್ರಕರಣದ ವರದಿ ನೀಡಲಾಗಿದೆ’ ಎಂದು ದೇಗುಲದ ಇಒ ಕುಮಾರಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.