ಸುತ್ತೂರು: ‘ರಾಜಕಾರಣ ಎಂಬುದು ಇಂದು ಹಣ ಆಧಾರಿತವಾಗಿದೆ. ಚುನಾವಣೆಗೆ ಇಂತಿಷ್ಟು ಕೋಟಿ ರೂಪಾಯಿ ಖರ್ಚುಮಾಡಿ ಗೆದ್ದ ಬಳಿಕ ಅದನ್ನು ಗಳಿಸಬೇಕು ಎನ್ನುವ ವ್ಯಾಪಾರಿ ಮನೋಭಾವ ರಾಜಕಾರಣದಲ್ಲಿದೆ’ ಎಂದು ಜೆಡಿಯು ರಾಜ್ಯಘಟಕದ ಅಧ್ಯಕ್ಷ ಮಹಿಮಾ ಪಟೇಲ್ ಇಲ್ಲಿ ಬೇಸರ ವ್ಯಕ್ತಪಡಿಸಿದರು.
ಸುತ್ತೂರು ಜಾತ್ರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಭಜನಾ ಮೇಳ, ದೇಸಿ ಆಟ, ಚಿತ್ರಕಲಾ ಶಿಬಿರ ಹಾಗೂ ದೋಣಿವಿಹಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವಿಷಪೂರಿತಗೊಂಡ ಕೃಷಿಯನ್ನು ದೂರ ಮಾಡಿ ಹೇಗೆ ಸಾವಯವ ಪದ್ಧತಿ ಅಳವಡಿಸಿಕೊಂಡಿದ್ದೇವೆಯೋ ಅದೇ ರೀತಿ ವಿಷಪೂರಿತವಾಗಿರುವ ರಾಜಕಾರಣವನ್ನು ಶುದ್ಧೀಕರಿಸಬೇಕು. ಎಲ್ಲರೂ ಸೇರಿ ಸಾವಯವ ರಾಜಕಾರಣ ನಿರ್ಮಾಣ ಮಾಡಬೇಕು. ಸಮಾಜಕ್ಕೆ ಉತ್ತಮವಾದ ಕೆಲಸ ಮಾಡಬೇಕು ಎಂಬ ಮನೋಭಾವ ವಿಧಾನಸಭೆಯಲ್ಲಿ ಇರುವ ಎಲ್ಲರಲ್ಲೂ ಬರಬೇಕು’ ಎಂದು ಆಶಿಸಿದರು.
‘ಒಳ್ಳೆಯ ಆಲೋಚನೆಯಿಂದ ರಾಜಕಾರಣಕ್ಕೆ ಬಂದರೂ ಪರಿಸ್ಥಿತಿಯ ಒತ್ತಡದಿಂದಾಗಿ ದಾರಿ ತಪ್ಪುತ್ತಾರೆ. ಇದರಿಂದಾಗಿ ರಾಜಕಾರಣಿಗಳ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ. ಈ ಕಾರಣದಿಂದ ಜನರಿಗೆ ಬೇಕಾದುದರ ಬಗ್ಗೆ ರಾಜಕಾರಣಿಗಳು ಆಲೋಚನೆ ಮಾಡಬೇಕು. ಸರ್ಕಾರಗಳು ಕೆಲಸ ಇದ್ದಲ್ಲಿಗೆ ಯುವಕರನ್ನು ಕರೆದುಕೊಂಡು ಹೋಗದೆ ಯುವಕರು ಇರುವ ಹಳ್ಳಿಗಳಿಗೇ ಕೆಲಸ ತೆಗೆದುಕೊಂಡು ಹೋಗಬೇಕು’ ಎಂದು ಸಲಹೆ ನೀಡಿದರು.
ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಮಾತನಾಡಿದರು.
ದೇಸಿ ಆಟಗಳನ್ನು ಸಕ್ಕರೆ ಸಚಿವೆ ಡಾ.ಎಂ.ಸಿ.ಮೋಹನಕುಮಾರಿ ಉದ್ಘಾಟಿಸಿದರು. ಚಾಮರಾಜನಗರ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ರಾಮಚಂದ್ರ, ಶಿವಗಿರಿ ಮಠದ ವಿದ್ಯಾನಂದಸ್ವಾಮೀಜಿ, ದೇವನೂರು ಗುರುಮಲ್ಲೇಶ್ವರ ದಾಸೋಹ ಮಹಾಸಂಸ್ಥಾನ ಮಠದ ಮಹಾಂತ ಸ್ವಾಮೀಜಿ, ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಿ.ವಿ.ಸೀತಾರಾಂ, ಪ್ರೊ.ವಿಷಕಂಠಮೂರ್ತಿ, ಪ್ರೊ.ಸ್ಟೀವನ್ ಚಿಲ್ಡ್ರ್ಸ್, ಶೀಲಾ ನಟರಾಜ್ ಇದ್ದರು.
**
ರಾಜಕಾರಣಿಗಳು ಮಾತನಾಡುವಾಗ ಸಿಟ್ಟು, ಆಕ್ರೋಶ ವ್ಯಕ್ತಪಡಿಸದೆ ಸಮಾಜಕ್ಕೆ ಉತ್ತಮ ಭಾವನೆ ನೀಡಬೇಕು. ಜನರಲ್ಲಿ ವಿಶ್ವಾಸ ಮೂಡುವಂತೆ ಕೆಲಸಮಾಡಬೇಕು
ಮಹಿಮಾ ಪಟೇಲ್, ರಾಜ್ಯ ಘಟಕದ ಅಧ್ಯಕ್ಷ, ಸಂಯುಕ್ತ ಜನತಾ ದಳ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.