ಲಿಂಗಸುಗೂರು: ‘ರಾಯಚೂರು ಜಿಲ್ಲೆಯಲ್ಲಿ ಅಕ್ರಮ ಸಾಗುವಳಿದಾರರ ಮೇಲೆ ಅರಣ್ಯಾಧಿಕಾರಿಗಳ ನಡೆಸುತ್ತಿರುವ ದೌರ್ಜನ್ಯ ಹಾಗೂ ವಿವಿಧ ಇಲಾಖೆಗಳಲ್ಲಿ ನಡೆಯುತ್ತಿರುವ ಭ್ರಷ್ಟಚಾರ ತಡೆಯುವಂತೆ’ ರೈತ ಸಂಘದ ಹಿರಿಯ ಮುಖಂಡ ಅಮರಣ್ಣ ಗುಡಿಹಾಳ ಒತ್ತಾಯಿಸಿದರು.
ಸೋಮವಾರ ಪಟ್ಟಣಕ್ಕೆ ಬಂದಿದ್ದ ಪ್ರಾದೇಶಿಕ ಆಯುಕ್ತ ಹರ್ಷಗುಪ್ತಾ ಅವರನ್ನು ಭೇಟಿ ಮಾಡಿದ ರೈತರ ನಿಯೋಗ, ‘ಹಲವು ವರ್ಷಗಳಿಂದ ಸರ್ಕಾರಿ ಹಾಗೂ ಅರಣ್ಯ ಭೂಮಿಗಳಲ್ಲಿ ಅಕ್ರಮ ಸಾಗುವಳಿ ಮಾಡುತ್ತಿರುವ ರೈತರ ಜಮೀನುಗಳಲ್ಲಿ ಅರಣ್ಯ ಇಲಾಖೆ ಅಕ್ರಮವಾಗಿ ಗುಂಡಿ ತೆಗೆದು ಅವರ ಬದುಕನ್ನು ಹಾಳು ಮಾಡಿದೆ. ಅಲ್ಲದೆ, ಕ್ರಿಮಿನಲ್ ಪ್ರಕರಣ ದಾಖಲು ಮಾಡಿ ರೈತ ಕುಟುಂಬಗಳಿಗೆ ಮಾನಸಿಕ ಹಿಂಸೆ ನೀಡುತ್ತಿದೆ’ ಎಂದು ಗಮನ ತಿಳಿಸಿದರು.
‘ಫೂಲಭಾವಿ ಗ್ರಾಮದ ಅಮರಪ್ಪ ಎಂಬುವವರಿಗೆ ಕಂದಾಯ ಇಲಾಖೆ 1999ರಲ್ಲಿ ಪಟ್ಟಾ ಆದೇಶ ನೀಡಿದೆ. ಈ ಆದೇಶದನ್ವಯ ವರ್ಗಾವಣೆ ಮಾಡುವಂತೆ ಅರ್ಜಿ ಸಲ್ಲಿಸಿದರು. ಸಹ ಇಂದಿಗೂ ಪಹಣಿಯಲ್ಲಿ ಹೆಸರು ಸೇರ್ಪಡೆ ಮಾಡಿಲ್ಲ. ವರ್ಗಾವಣೆ ಕಂದಾಯ ಅಧಿಕಾರಿಗಳು ಲಂಚ ಕೇಳು ತ್ತಿದ್ದಾರೆ. ಒಂದಡೆ ಕಂದಾಯ, ಇನ್ನೊಂದಡೆ ಅರಣ್ಯ ಇಲಾಖೆ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ’ ಎಂದು ರೈತರು ದೂರಿದರು.
‘ಸರ್ವೆ ಇಲಾಖೆಯಲ್ಲಿ ಕಾನೂನುಬದ್ಧವಾಗಿ ಅರ್ಜಿ ಸಲ್ಲಿಸಿ ಕೆಲಸ ಮಾಡಿಸಿಕೊಳ್ಳುವುದು ಕಷ್ಟದ ಕೆಲಸವಾಗಿದೆ. ಅರ್ಜಿ ಜತೆಗೆ ಹಣ ನೀಡಿದರೆ ತಕ್ಷಣ ಕೆಲಸ ಆಗುತ್ತದೆ. ಪಡಿತರ ಚೀಟಿ ನೀಡುವಲ್ಲಿ ಸಹ ಇದೆ ಸ್ಥಿತಿ. ’ ಎಂದು ರೈತರು ದೂರಿದರು.
ಪಹಣಿ ಕೇಂದ್ರದಲ್ಲಿನ ತಾಂತ್ರಿಕ ದೋಷಗಳಿಗೆ ರೈತರು ಪರದಾಡುವಂತಾಗಿದೆ. ಜಿಲ್ಲೆಯಲ್ಲಿ ಹಿಂಗಾರು ಮತ್ತು ಮುಂಗಾರು ಹಂಗಾಮಿನ ಬೆಳೆನಷ್ಟ ಪರಿಹಾರ ನೀಡಿಕೆಯಲ್ಲಿ ತಾರತಮ್ಯ ನಡೆದಿದೆ ಎಂದು ಆರೋಪಿಸಿದರು.
ಉಪ ವಿಭಾಗಾಧಿಕಾರಿ ದಿವ್ಯಾಪ್ರಭು, ಕೃಷಿ ಇಲಾಖೆ ಜಂಟಿ ನಿರ್ದೇಶಕ ವಿರೇಶ ಹುನಗುಂದ, ಶಿರಸ್ತೆದಾರ ವಾಣಿ. ಮುಖಂಡರಾದ ಅಮರಣ್ಣ ಗುಡಿಹಾಳ, ಹಾಜಿಬಾಬು, ಅಮರೇಶ ಕಂದಗಲ್, ಬಸವರಾಜ ವಕ್ರಾಣಿ, ಮೌನೇಶ ಫೂಲಭಾವಿ, ಬಸವರಾಜ ಫೂಲಭಾವಿ, ಬಾಲಪ್ಪ ಕಡ್ಡೋಣಿ, ಅಮರಪ್ಪ ಫೂಲಭಾವಿ, ಮಾನಪ್ಪಯ್ಯ, ಹನುಮಂತ ಪೂಜಾರಿ, ಹನುಮಪ್ಪ ಹಂಚಿನಾಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.