ದೇವದುರ್ಗ: ‘ಬಿಜೆಪಿ ಸರ್ಕಾರದ ಅಧಿಕಾರ ಅವಧಿಯಲ್ಲಿ ದೇವದುರ್ಗ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಹೆಸರಿನಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ₹ 2,000 ಕೋಟಿ ಅನುದಾನ ಆಗಿನ ಶಾಸಕರು ದುರ್ಬಳಕೆ ಮಾಡಿಕೊಂಡಿದ್ದಾರೆ’ ಎಂದು ಆರೋಪಿಸಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ದೇವದುರ್ಗ–ರಾಯಚೂರು ರಾಜ್ಯ ಹೆದ್ದಾರಿಯಲ್ಲಿನ ಡಾ. ಅಂಬೇಡ್ಕರ್ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಕೈಗೊಂಡ ಪ್ರತಿಭಟನಾಕಾರರು, ‘ದುರ್ಬಳಕೆ ಕುರಿತು ಸಮಗ್ರ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.
‘2008ರಲ್ಲಿ ಬಿಜೆಪಿ ಸರ್ಕಾರ ಇದ್ದಾಗ ಶಾಸಕರಾಗಿದ್ದ ಶಿವನಗೌಡ ನಾಯಕ ಮತ್ತು ಅಧಿಕಾರಿಗಳು ಸುಳ್ಳು ದಾಖಲಾತಿ ಸೃಷ್ಟಿಸಿ ಅನುದಾನ ದುರ್ಬಳಕೆ ಮಾಡಿಕೊಂಡ ಬಗ್ಗೆ ಶಂಕೆಯಿದ್ದು, ಇದರ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಮೌನವಾಗಿದೆ’ ಎಂದು ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ. ವಿರೂಪಾಕ್ಷಿ ಆರೋಪಿಸಿದರು.
‘ಇಲ್ಲಿನ ವಿಧಾನಸಭಾ ಕ್ಷೇತ್ರ ಕೇವಲ ಕುಟುಂಬ ರಾಜಕಾರಣಕ್ಕೆ ಮಾತ್ರ ಸೀಮಿತವಾಗಿದ್ದು, ಜನರಿಗೆ ಮರಳು ಮಾಡಲು ಕಾಂಗ್ರೆಸ್ ಮತ್ತು ಬಿಜೆಪಿ ತಾಲ್ಲೂಕಿನಲ್ಲಿ ಒಳ ಒಪ್ಪಂದ ಮಾಡಿಕೊಂಡಿವೆ. 2018ರ ಚುನಾವಣೆಯಲ್ಲಿ ಇದನ್ನು ಬೇರು ಸಹಿತ ಕಿತ್ತಿಹಾಕುವ ಕೆಲಸ ಇಲ್ಲಿನ ಮತದಾರರು ಮಾಡಬೇಕು’ ಎಂದು ಹಿರಿಯ ಮುಖಂಡ ಮುದುಕಪ್ಪ ನಾಯಕ ಅರಕೇರಾ ಆಗ್ರಹಿಸಿದರು.
20 ಬೇಡಿಕೆಯನ್ನು ಒಳಗೊಂಡ ಮನವಿಪತ್ರವನ್ನು ತಹಶೀಲ್ದಾರ್ ಕೆ.ಶಿವಶರಣಪ್ಪ ಅವರಿಗೆ ಸಲ್ಲಿಸಲಾಯಿತು. ಜೆಡಿಎಸ್ ತಾಲ್ಲೂಕು ಘಟಕದ ದಾನಪ್ಪ ಆಲ್ಕೋಡ್, ಮುಖಂಡರಾದ ಕರೆಮ್ಮ ಗೋಪಾಲಕೃಷ್ಣ, ಮುಖಂಡರಾದ ಅಕ್ಬರ್ ನಾಗುಂಡಿ, ದಾನಪ್ಪ ಆಲ್ಕೋಡ್, ಕರೆಮ್ಮ ಗೋಪಾಲಕೃಷ್ಣಾ, ರಾಘವೇಂದ್ರ ಕೋಲ್ಕಾರ್, ಜಿ. ಬಸವರಾಜ ನಾಯಕ, ಹನುಮಂತರಾಯ ಚಿಂತಲಕುಂಟಿ, ಕಿರಿಲಿಂಗಪ್ಪ ಜಾಲಹಳ್ಳಿ, ಶಿವಣ್ಣ ಕಿಲ್ಲೆ, ಶಾಲಂ ಉದ್ಧಾರ್, ಫೀರೋಜ್ ಖಾನ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.