ADVERTISEMENT

ಅನುದಾನ ಬಳಸದಿದ್ದರೆ ಕ್ರಮಕ್ಕೆ ಸೂಚನೆ: ಗಿರಿಮಲ್ಲಪ್ಪ

​ಪ್ರಜಾವಾಣಿ ವಾರ್ತೆ
Published 24 ಮೇ 2017, 5:57 IST
Last Updated 24 ಮೇ 2017, 5:57 IST

ರಾಯಚೂರು: ‘ಪರಿಶಿಷ್ಟ ಪಂಗಡ ಅಭಿವೃದ್ಧಿಗಾಗಿ ಸರ್ಕಾರವು ಬಿಡುಗಡೆಗೊಳಿಸಿದ ಅನುದಾನವನ್ನು ಅಧಿಕಾರಿಗಳು ಸಮರ್ಪಕವಾಗಿ ವೆಚ್ಚ ಮಾಡದಿದ್ದರೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗುವುದು’ ಎಂದು ಪರಿಶಿಷ್ಟ ಪಂಗಡ ನಿಗಮದ ಅಧ್ಯಕ್ಷ ಗಿರಿಮಲ್ಲಪ್ಪ ಹೇಳಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳುವುದಕ್ಕೆ ಜನರನ್ನು ಜಾಗೃತಿಗೊಳಿಸಬೇಕು. ಪ್ರತಿ ವರ್ಷವೂ ಕೋಟ್ಯಂತರ ಹಣ ಬಿಡುಗಡೆ ಮಾಡಲಾಗುತ್ತಿದೆ. ಯೋಜನೆಗಳನ್ನು ಜನರಿಗೆ ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿ ವರ್ಗದವರು ಮಾಡಬೇಕಿದೆ’ ಎಂದರು.

‘ಸ್ವಯಂ ಉದ್ಯೋಗ ಯೋಜನೆ ಅಡಿಯಲ್ಲಿ ಪರಿಶಿಷ್ಟ ಪಂಗಡ ನಿಗಮ ಉತ್ತಮ ಪ್ರಗತಿ ಸಾಧಿಸಿದೆ. ಹೈನುಗಾರಿಕೆ ಯೋಜನೆ ಮಹಿಳೆಯರಿಗೆ ಸಾಧನೆಯ ಮೇಲೆ ಅವಲಂಬನೆಯಾಗಿದೆ. ಸಾಲ ಮರುಪಾವತಿ ನಂತರ ಬ್ಯಾಂಕ್ ಸಾಲ ನೀಡುವ ಗುರಿ ಹೊಂದಲಾಗಿದೆ. ಇಲಾಖೆಯಿಂದ ಕಾರು, ಟ್ರ್ಯಾಕ್ಟರ್ ಸಬ್ಸಿಡಿ ಸಾಲಕ್ಕಾಗಿ ಈಗಾಗಲೇ ₹5 ಲಕ್ಷದವರೆಗೂ ನೀಡಲಾಗುತ್ತಿದೆ.

ADVERTISEMENT

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಅರ್ಜಿ ಸಲ್ಲಿಕೆ ಮಾಡಿರುವ ಜಿಲ್ಲೆಯ 165 ಫಲಾನುಭವಿಗಳಿಗೆ ಸಾಲ ಸೌಲಭ್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. ‘ಗಂಗಾಕಲ್ಯಾಣ ಯೋಜನೆಯಡಿ 300 ಫಲಾನುಭವಿಗಳು ಕೊಳವೆಬಾವಿ ಕೊರೆಯಿಸುವ ಯೋಜನೆ ಸದುಪಯೋಗ ಪಡೆದಿದ್ದಾರೆ. ಭೂ ಒಡೆತನ ಯೋಜನೆಯಡಿ ಅರ್ಜಿ ಸಲ್ಲಿಕೆ ಮಾಡಿರುವ 1080 ಫಲಾನುಭವಿಗಳ ಪೈಕಿ 380 ಜನರಿಗೆ ತಲಾ ಒಂದು ಎಕರೆ ಜಮೀನು ವಿತರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.