ಸಿಂಧನೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜಾತ್ಯಾತೀತ ಜನತಾ ದಳ ಬಹುಮತ ಗಳಿಸಿ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ರೈತರ ಸಂಪೂರ್ಣ ಸಾಲಮನ್ನಾ ಮಾಡಲಾಗುವುದು ಎಂದು ಮಾಜಿ ಶಾಸಕ ವೆಂಕಟರಾವ್ ನಾಡಗೌಡ ಹೇಳಿದರು.
ಜೆಡಿಎಸ್ ತಾಲ್ಲೂಕು ಘಟಕದಿಂದ ಹಮ್ಮಿಕೊಂಡಿರುವ ಪಾದಯಾತ್ರೆ ಗುರುವಾರ ತಾಲ್ಲೂಕಿನ ಶ್ರೀನಿವಾಸಕ್ಯಾಂಪಿಗೆ ತಲುಪಿತು. ನೂರಾರು ಮುಖಂಡರು ಹಾಗೂ ಮಹಿಳೆಯರು ವೆಂಕಟರಾವ್ ನಾಡಗೌಡಗೆ ಹೂಮಾಲೆ ಹಾಕಿ ಆರತಿ ಬೆಳಗಿ ಅದ್ದೂರಿ ಸ್ವಾಗತಿಸಿದರು.
ನಾಡಗೌಡ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಸಹಕಾರಿ ಬ್ಯಾಂಕ್ಗಳಲ್ಲಿನ ₹50 ಸಾವಿರವರೆಗಿನ ಅಲ್ಪಾವಧಿ ಸಾಲಮನ್ನಾ ಮಾಡಿರುವುದು ಮುಂಬರುವ ಚುನಾವಣೆ ದೃಷ್ಟಿಯಿಂದ ಹೊರತು ರೈತರ ಮೇಲಿನ ಕಾಳಜಿಯಿಂದಲ್ಲ. ನಿಜವಾಗಿ ಸಹಾಯ ಮಾಡುವ ಚಿಂತನೆ ಅವರಿಗಿದ್ದರೆ ರೈತರನ್ನು ಸಂಪೂರ್ಣ ಋಣಮುಕ್ತರನ್ನಾಗಿ ಮಾಡಬೇಕಿತ್ತು ಎಂದರು.
ಸಿಂಧನೂರು ನಗರದಲ್ಲಿ ಕಳೆದ ಎರಡು ವರ್ಷಗಳಿಂದ ನಡೆಯುತ್ತಿರುವ ಯುಜಿಡಿ, 24*7 ಕುಡಿಯುವ ನೀರು ಹಾಗೂ ನಗರೋತ್ಥಾನ ಯೋಜನೆ ಕಾಮಗಾರಿಗಳು ತೀವ್ರ ಕಳಪೆ ಮಟ್ಟದಿಂದ ಕೂಡಿವೆ. ಶಾಸಕ ಹಂಪನಗೌಡ ಬಾದರ್ಲಿ ಹಾಗೂ ನಗರಸಭೆ ಆಡಳಿತ ಮಂಡಳಿ ಗುತ್ತಿಗೆದಾರರಿಂದ ಗುಣಮಟ್ಟದ ಕಾಮಗಾರಿ ಮಾಡಿಸಿಲ್ಲ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಎನ್.ಶಿವನಗೌಡ ಗೊರೇಬಾಳ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ, ತಾಲ್ಲೂಕು ಪಂಚಾಯಿತಿ ಸದಸ್ಯರಾದ ಉದಯಗೌಡ ಗಿಣಿವಾರ, ಗ್ಯಾನಪ್ಪ, ಮಾಜಿ ಸದಸ್ಯ ಚಂದ್ರುಭೂಪಾಲ ನಾಡಗೌಡ, ನಗರಸಭೆ ಮಾಜಿ ಉಪಾಧ್ಯಕ್ಷ ಕೆ.ಜಿಲಾನಿಪಾಷಾ, ಮುಖಂಡರಾದ ಜಹಿರುಲ್ಲಾ ಹಸನ್, ವೆಂಕಟರೆಡ್ಡಿ ಶ್ರೀನಿವಾಸಕ್ಯಾಂಪ್, ಮೋಹನರೆಡ್ಡಿ ರಾಮರೆಡ್ಡಿಕ್ಯಾಂಪ್, ಸುಮಿತ್ ತಡಕಲ್, ವೀರೇಶ ಹಟ್ಟಿ, ಬಸವರಾಜ, ಬಸನಗೌಡ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.