ಲಿಂಗಸುಗೂರು: ಡಾ. ಬಿ.ಆರ್. ಅಂಬೇಡ್ಕರ್ ಅವರ ಸಾಧನೆಗಳು, ನಾಡಿಗೆ ನೀಡಿದ ಕೊಡುಗೆಗಳ ವಾಸ್ತವ ಅಂಶಗಳ ಮೇಲೆ ಬೆಳಕು ಚೆಲ್ಲಲು ಅಂಬೇಡ್ಕರ್ ಜ್ಞಾನ ದರ್ಶನ ಅಭಿಯಾನ ನಡೆಸಲು ದಲಿತ ಸಮೂಹ ಮುಂದಾಗಬೇಕು ಎಂದು ಶಿಕ್ಷಕ ದುರುಗಪ್ಪ ಪರಂಗಿ ಕರೆ ನೀಡಿದರು.
ಶುಕ್ರವಾರ ಅಂಬೇಡ್ಕರ್ ಅವರ 126ನೇ ಜಯಂತಿಯಲ್ಲಿ ಮಾತನಾಡಿ, ಅಂಬೇಡ್ಕರ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುತ್ತಿರುವುದು ನೋವಿನ ಸಂಗತಿ ಎಂದು ಕಳವಳ ವ್ಯಕ್ತಪಡಿಸಿದರು.
ಉಪ ವಿಭಾಗಾಧಿಕಾರಿ ದಿವ್ಯಾಪ್ರಭು ಮಾತನಾಡಿ, ಅಂಬೇಡ್ಕರ್ ಅಂತಹ ಮಹಾನ್ ನಾಯಕರು ಬದುಕು, ಜೀವನ ಶೈಲಿ ಶಿಕ್ಷಣ, ಸಂಘಟನೆ, ಹೋರಾಟದ ಮೂಲ ಮಂತ್ರಗಳಡಿ ನಾವು ಹೊಸ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಶಾಸಕ ಮಾನಪ್ಪ ವಜ್ಜಲ, ಪೃಥ್ವಿ ಚೆನ್ನಯ್ಯಸ್ವಾಮಿ ಹಿರೇಮಠ ಮಾತನಾಡಿ, ಜಯಂತಿ ಕೇವಲ ಆಚರಣೆಗೆ ಸೀಮಿತ ಆಗಬಾರದು. ಅವರ ತತ್ವಾದರ್ಶಗಳನ್ನು ಮೈಗೂಡಿಸಬೇಕು ಎಂದರು.
ಮೆರವಣಿಗೆ: ತಾಲ್ಲೂಕು ಆಡಳಿತ ಹಾಗೂ ವಿವಿಧ ದಲಿತ ಸಂಘಟನೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಶಾಸಕ ಮಾನಪ್ಪ ವಜ್ಜಲ ಮೆರವಣಿಗೆಗೆ ಚಾಲನೆ ನೀಡಿದರು.
ಪುರಸಭೆ ಅಧ್ಯಕ್ಷ ಖಾದರಪಾಷ, ಎಪಿಎಂಸಿ ಅಧ್ಯಕ್ಷ ಶಾಂತಲಾ ಹನುಮಂತಪ್ಪ ಕಂದಗಲ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಶರಣಬಸಪ್ಪ ಗುಡದನಾಳ, ಟಿಎಪಿಸಿಎಂಎಸ್ ಅಧ್ಯಕ್ಷ ಸೋಮಶೇಖರ ಐದನಾಳ, ತಹಶೀಲ್ದಾರ್ ಶಿವಾನಂದ ಸಾಗರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಬಾಬು ರಾಠೋಡ, ಸಮಾಜ ಕಲ್ಯಾಣ ಅಧಿಕಾರಿ ರಾಜೇಂದ್ರಕುಮಾರ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.