ಕವಿತಾಳ: ಸಮೀಪದ ಮಲ್ಲದಗುಡ್ಡ ಗ್ರಾಮದ ತುಂಗಭದ್ರ ಎಡದಂಡೆ ಕಾಲುವೆ ವ್ಯಾಪ್ತಿಯ ಜಮೀನುಗಳಿಗೆ ಬಸಿ ನೀರು ಹರಿದು ಹೋಗುವ ನಾಲೆಗೆ ಪ್ರಭಾವಿ ರೈತರೊಬ್ಬರು ಮಣ್ಣು ಭರ್ತಿ ಮಾಡುತ್ತಿರುವುದಕ್ಕೆ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ.
‘ಮಲ್ಲದಗುಡ್ಡ ತಡಕಲ್ ವ್ಯಾಪ್ತಿಯ ಸದ್ರಿ ನಾಲೆಯ ಹೂಳು ತೆಗೆಯಲು ತುಂಗಭದ್ರ ಕಾಡಾ ಇಲಾಖೆ ವತಿಯಿಂದ ಕಳೆದ ಮೂರು ವರ್ಷಗಳ ಅವಧಿಯಲ್ಲಿ ಅಂದಾಜು ₹15 ಲಕ್ಷ ವೆಚ್ಚ ಮಾಡಲಾಗಿದೆ.
ಇದೀಗ ಹೂಳು ತೆಗೆದ ನಾಲೆಗೆ ರೈತರೊಬ್ಬರು ಅನಧಿಕೃತವಾಗಿ ಮಣ್ಣು ಭರ್ತಿ ಮಾಡುತ್ತಿದ್ದು, ಅಧಿಕಾರಿಗಳು ಮೌನವಾಗಿದ್ದಾರೆ’ ಎಂದು ಮಲ್ಲದಗುಡ್ಡ ಗ್ರಾಮದ ರೈತ ಮೌನೇಶ ಸ್ವಾಮಿ ಆರೋಪಿಸಿದ್ದಾರೆ.
‘ನಾಲೆಯ ಮುಂಭಾಗದಲ್ಲಿ ಕೆರೆಯನ್ನು ಹೊಂದಿರುವ ಸದ್ರಿ ರೈತರು ತಮ್ಮ ಕೆರೆಗೆ ಹೊಂಡು ಹರಿದು ಬರುತ್ತದೆ ಎನ್ನುವ ನೆಪವೊಡ್ಡಿ ಮಣ್ಣು ಭರ್ತಿ ಮಾಡುತ್ತಿದ್ದಾರೆ. ಮಣ್ಣು ಭರ್ತಿ
ಮಾಡುವುದರಿಂದ ಅಕ್ಕಪಕ್ಕದಲ್ಲಿನ ಜಮೀನುಗಳಿಗೆ ಮಳೆ ನೀರು ನುಗ್ಗಿ ಬೆಳೆ ಹಾಳಗುತ್ತದೆ’ ಎನ್ನುವುದು ರೈತರ ಆರೋಪ.
‘ಮಳೆಗಾಲದಲ್ಲಿ ಬಸಿ ನೀರು ಸರಾಗವಾಗಿ ಹರಿದು ಮುಂದೆ ಹೋಗಲಿ ಎನ್ನುವ ಕಾರಣಕ್ಕೆ ನಿರ್ಮಿಸಿದ ನಾಲೆಯಲ್ಲಿ ಹೂಳು ತೆಗೆಯಲು ಮತ್ತು ದುರಸ್ತಿಗೆ ಸರ್ಕಾರ ಲಕ್ಷಾಂತರ ಮೊತ್ತ ಭರಿಸಿದೆ. ಇದೀಗ ನಾಲೆಗೆ ಮಣ್ಣು ಭರ್ತಿ ಮಾಡಿದಲ್ಲಿ ಅಕ್ಕಪಕ್ಕದ ಸಣ್ಣ ರೈತರ ಜಮೀನುಗಳು ಹಾಳಾಗುತ್ತವೆ. ಹೀಗಾಗಿ ತಹಶೀಲ್ದಾರರು ಮತ್ತು ಸಂಬ್ಬಂದಪಟ್ಟ ಅಧಿಕಾರಿಗಳು ಶೀಘ್ರ ಗಮನಹರಿಸಬೇಕು’ ಎಂದು ರೈತರಾದ ಮಲ್ಲಯ್ಯ ಗೋರ್ಕಲ್, ಈರಯ್ಯಸ್ವಾಮಿ, ವರದಪ್ಪ, ವೀರಯ್ಯ ಪರಂಗಿ ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.