ADVERTISEMENT

ಮರಳು ಘಟಕ ಆರಂಭಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 7:33 IST
Last Updated 14 ಸೆಪ್ಟೆಂಬರ್ 2017, 7:33 IST

ಮಾನ್ವಿ: ತಾಲ್ಲೂಕಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಮರಳು ಪೂರೈಕೆ ಘಟಕ ಆರಂಭಕ್ಕೆ ಒತ್ತಾಯಿಸಿ ಮೂರು ದಿನಗಳಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದ ಕಟ್ಟಡ ಕಾರ್ಮಿಕರು, ಟಿಪ್ಪರ್ ಮಾಲೀಕರು ಮತ್ತು ಅಂಬೇಡ್ಕರ್‌ ದಲಿತ ಸೇನೆ ಕಾರ್ಯಕರ್ತರು ಬುಧವಾರ ಉಪ ವಿಭಾಗಾಧಿಕಾರಿ ನೀಡಿದ ಲಿಖಿತ ಭರವಸೆ ಮೇರೆಗೆ ಧರಣಿ ಅಂತ್ಯಗೊಳಿಸಿದರು.

ಪಟ್ಟಣದ ಶಾಸಕರ ಭವನದ ಆವರಣದಲ್ಲಿನ ಧರಣಿ ಸ್ಥಳಕ್ಕೆ ಬಂದ ಉಪ ವಿಭಾಗಾಧಿಕಾರಿ ವೀರಮಲಪ್ಪ ಪೂಜಾರಿ ಧರಣಿ ನಿರತ ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿದರು.

ನಂತರ ಮಾತನಾಡಿದ ಅವರು, ‘ತಾಲ್ಲೂಕಿನ ನದಿಪಾತ್ರದ ಗ್ರಾಮಗಳಾದ ಎಡಿವಾಳ, ಮದ್ಲಾಪುರ, ಚೀಕಲಪರ್ವಿ ಸೇರಿದಂತೆ ವಿವಿಧೆಡೆ ಸಾರ್ವಜನಿಕರಿಗಾಗಿ ಐದು ಮರಳು ಪೂರೈಕೆ ಘಟಕಗಳು ಮತ್ತು ಸರ್ಕಾರಿ ಕಾಮಗಾರಿಗಳಿಗೆ ಮರಳು ಪೂರೈಕೆ ಮಾಡಲು ಎರಡು ಘಟಕಗಳನ್ನು ಹದಿನೈದು ದಿನಗಳಲ್ಲಿ ಆರಂಭಿಸಲಾಗುವುದು’ ಎಂದು ಭರವಸೆ ನೀಡಿದರು.

ADVERTISEMENT

ಅಂಬೇಡ್ಕರ್‌ ದಲಿತ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ನಾಗಲಾಪುರ ಮಾತನಾಡಿ, ‘ತಾಲ್ಲೂಕಿನ ಮರಳಿನ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ. ಕಟ್ಟಡ ಕಾರ್ಮಿಕರು ದುಡಿಮೆ ಇಲ್ಲದೆ ಸಂಕಷ್ಟದ ಪರಿಸ್ಥಿತಿ ಎದುರಿಸುವಂತಾಗಿದೆ. ಕಾರಣ ಆದಷ್ಟು ಬೇಗನೆ ಮರಳು ಪೂರೈಕೆ ಘಟಕಗಳನ್ನು ಆರಂಭಿಸುವ ಅವಶ್ಯಕತೆ ಇದೆ. ಈ ಕುರಿತು ಉಪ ವಿಭಾಗಾಧಿಕಾರಿ ಭರವಸೆ ಮೇರೆಗೆ ಅನಿರ್ದಿಷ್ಟಾವಧಿ ಧರಣಿಯನ್ನು ಅಂತ್ಯಗೊಳಿಸಿದ್ದೇವೆ’ ಎಂದರು.

ತಹಶೀಲ್ದಾರ್‌ ಪಿ.ಪರಶುರಾಮ, ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ, ಸಿಪಿಐ ಚಂದ್ರಶೇಖರ ನಾಯಕ, ಪಿಎಸ್‌ಐ ಮಂಜುನಾಥ, ದಲಿತ ಸೇನೆಯ ತಾಲ್ಲೂಕು ಅಧ್ಯಕ್ಷ ಆರ್‌.ಚೆನ್ನಬಸವ ಬಾಗಲವಾಡ ಮತ್ತು ವಿವಿಧ ಸಂಘಟನೆಗಳ ಮುಖಂಡರು ಇದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.