ADVERTISEMENT

ವಿವಿಧೆಡೆ ಅಂಗನವಾಡಿ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 9:08 IST
Last Updated 24 ಮಾರ್ಚ್ 2017, 9:08 IST

ಲಿಂಗಸುಗೂರು: ಬೆಂಗಳೂರಿನಲ್ಲಿ ಅಂಗನವಾಡಿ ನೌಕರರು ನಡೆಸುತ್ತಿರುವ ಧರಣಿ ಬೆಂಬಲಿಸಿದ ನೌಕರರು ಕೇಂದ್ರಗಳನ್ನು ಬಂದ್‌ ಮಾಡಿ ಕರ್ನಾಟಕ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಷನ್‌ (ಎಐಟಿಯುಸಿ) ವತಿಯಿಂದ ಗುರುವಾರ ಉಪ ವಿಭಾಗಾಧಿಕಾರಿ ಕಚೇರಿ ಶಿರಸ್ತೆದಾರ ಎನ್‌.ಎಂ.ಪತ್ತಾರ ಅವರಿಗೆ ಮನವಿ ಸಲ್ಲಿಸಿದರು.

ಕನಿಷ್ಠ ವೇತನ ಮಂಜೂರು ಮಾಡಬೇಕು. ಸೇವೆಯಯನ್ನು ಕಾಯಂಗೊಳಿಸಬೇಕು. ಗುಣಮಟ್ಟದ ಪೌಷ್ಠಿಕ ಆಹಾರ ಪೂರೈಸಬೇಕು ಎಂದು ಒತ್ತಾಯಿಸಿದರು.

ಸಂಘಟನೆ ತಾಲ್ಲೂಕು ಅಧ್ಯಕ್ಷೆ ಶ್ಯಾವಮ್ಮ ಜೂಲಗುಡ್ಡ, ಕಾರ್ಯದರ್ಶಿ ವೀರಬಸಮ್ಮ ಹೆಸರೂರು, ಉಪಾಧ್ಯಕ್ಷೆ ನಾಗರತ್ನ, ಮುಖಂಡರಾದ ಸುವರ್ಣ, ಲಲಿತಾ, ಸುಲೋಚನಾ, ರೇಣುಕಾ, ಅಮರಮ್ಮ, ಹುಲಿಗೆಮ್ಮ ಸಾವಿತ್ರಿ, ಲಿಂಬೆಮ್ಮ, ಗದ್ದೆಮ್ಮ, ವಿಜಯಲಕ್ಷ್ಮಿ, ಶಂಕರಮ್ಮ ಭಾಗವಹಿಸಿದ್ದರು.

ಸಿಂಧನೂರು ವರದಿ:  ಅಂಗನವಾಡಿ ನೌಕರರು  ಬೆಂಗಳೂರಿನಲ್ಲಿ ಹೋರಾಟ ನಡೆಸುತ್ತಿದ್ದರೂ ರಾಜ್ಯ ಸರ್ಕಾರ ಸ್ಪಂದಿಸದಿರುವದನ್ನು ವಿರೋಧಿಸಿ ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಫೆಡರೇಶನ್ ತಾಲ್ಲೂಕು ಘಟಕ ಗುರುವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿತು.
ಇಲ್ಲಿನ ಪ್ರವಾಸಿ ಮಂದಿರದಿಂದ ಮೆರವಣಿಗೆ ಹೊರಟ ಕಾರ್ಯಕರ್ತೆಯರು ಮಿನಿವಿಧಾನಸೌಧದಲ್ಲಿ  ತಹಶೀಲ್ದಾರ್‌ಗೆ ಮನವಿ ಸಲ್ಲಿಸಿದರು.

ಫೆಡರೇಶನ್ ರಾಜ್ಯ ಘಟಕದ ಉಪಾಧ್ಯಕ್ಷೆ ಪ್ರಭಾವತಿ, ಮುಖಂಡರಾದ ತಿಪ್ಪಯ್ಯಶೆಟ್ಟಿ, ವೆಂಕನಗೌಡ ಗದ್ರಟಗಿ, ಅಮರಮ್ಮ, ಜೆಡಿಎಸ್ ವಕ್ತಾರ ಬಸವರಾಜ ನಾಡಗೌಡ ಮಾತನಾಡಿದರು. ಅಂಗನವಾಡಿ ಮುಖಂಡರಾದ ಗಿರಿಜಮ್ಮ, ಆದಿಲಕ್ಷ್ಮೀ, ರತ್ನಮ್ಮ ದೇವರಗುಡಿ, ಶಾಂತಮ್ಮ ಗೊರೇಬಾಳ, ಗೌರಮ್ಮ ಅಲಬನೂರು, ಈರಮ್ಮ ಜವಳಗೇರಾ, ಶೋಭಾ ತುರ್ವಿಹಾಳ, ಶಾಂತಾ, ಯಮನಮ್ಮ, ಶರಣಪ್ಪ ಗೊರೇಬಾಳ, ಹನುಮಂತಪ್ಪ, ಜೆಡಿಎಸ್ ಮುಖಂಡರಾದ ಅಭಿಷೇಕ ನಾಡಗೌಡ, ಸುಮಿತ್ ತಡಕಲ್, ವೆಂಕಟೇಶ ನಂಜಲದಿನ್ನಿ ಇದ್ದರು.

ದೇವದುರ್ಗ ವರದಿ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಿಐಟಿಯು ತಾಲ್ಲೂಕು ಘಟಕದ ನೇತೃತ್ವದಲ್ಲಿ ಅಂಗನವಾಡಿ ನೌಕರರು  ಗುರುವಾರ ಸಾರ್ವಜನಿಕ ಕ್ಲಬ್‌ ಮೈದಾನದಿಂದ ಮಿನಿ ವಿಧಾನಸೌಧದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಸರ್ಕಾರ ಸೂಚಿಸುವ ಎಲ್ಲ ಕೆಲಸ ಮಾಡುವ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನೀಡುತ್ತಿಲ್ಲ. ಸರ್ಕಾರ ಸಂಘದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ತಹಶೀಲ್ದಾರ್‌ ಶಿವಶರಣಪ್ಪ ಕಟ್ಟೊಳಿ ಅವರಿಗೆ ಮನವಿ ಸಲ್ಲಿಸಿದರು. ಐಸಿಡಿಎಸ್‌ ಯೋಜನೆ ಖಾಸಗೀಕರಣ ಮಾಡಬಾರದು. ಭವಿಷ್ಯ ನಿಧಿ ನೀಡಬೇಕು ಎಂದು ಆಗ್ರಹಿಸಿದರು.

ಸಿಐಟಿಯು ಕಾರ್ಯದರ್ಶಿ ಗಿರಿಯಪ್ಪ ಪೂಜಾರಿ ಜಾಲಹಳ್ಳಿ, ಸಂಘದ ಅಧ್ಯಕ್ಷೆ ಶಕುಂತಲಾ ದೇಸಾಯಿ, ಶಬ್ಬೀರ್‌ ಜಾಲಹಳ್ಳಿ, ವಿಜಯಲಕ್ಷ್ಮೀ ಪಾಟೀಲ, ಲೀಲಾವತಿ, ಸುನಂದ, ಶಕೀಲಾ, ಈಶಮ್ಮ, ರಮಾದೇವಿ, ಚನ್ಮಮ್ಮ, ವಿಜಯಲಕ್ಷ್ಮಿ  ಇದ್ದರು.

ಮಾನ್ವಿ ವರದಿ: ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗೌರವ ಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಬೇಜವಾಬ್ದಾರಿ ಧೋರಣೆ ಖಂಡಿಸಿ ಎಐಟಿಯುಸಿ ಸಂಘಟನೆಯ ನೇತೃತ್ವದಲ್ಲಿ ಗುರುವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದ ತಾಲ್ಲೂಕಿನ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ನಂತರ ಬಸವ ವೃತ್ತದಲ್ಲಿ ಮಾನವ ಸರಪಳಿ ಮೂಲಕ ರಾಜ್ಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಬಂದ್‌ ಮಾಡಿ ಪ್ರತಿಭಟನೆ ನಡೆಸಿದರು.

ಕಾರ್ಯಕರ್ತೆಯರ ಗೌರವ ಧನವನ್ನು ಕನಿಷ್ಠ ₹10ಸಾವಿರಕ್ಕೆ ಹೆಚ್ಚಿಸಬೇಕು.  ತಾಲ್ಲೂಕಿನ ಸಿರವಾರ ವಲಯದ ಶಿಶು ಅಭಿವೃದ್ಧಿ ಕಚೇರಿಯನ್ನು ಮಾನ್ವಿಯಲ್ಲಿ ಮುಂದುವರಿಸಬೇಕೆಂದು ತಹಶೀಲ್ದಾರ್‌ ಪರಶುರಾಮ ಅವರಿಗೆ ಮನವಿ ಸಲ್ಲಿಸಿದರು.

ಎಐಟಿಯುಸಿ ಸಂಘಟನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಗಯ್ಯ ಸ್ವಾಮಿ, ತಾಲ್ಲೂಕು ಘಟಕದ ಅಧ್ಯಕ್ಷೆ ಕಾಳಮ್ಮ, ಗೌರವಾಧ್ಯಕ್ಷ ಎಂ.ಬಿ.ಸಿದ್ರಾಮಯ್ಯ ಸ್ವಾಮಿ, ಪದಾಧಿಕಾರಿಗಳಾದ ರೇಣುಕಾ, ಲಕ್ಷ್ಮೀ ಜಾಲಾಪುರ ಕ್ಯಾಂಪ್‌, ಹೇಮಾವತಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT