ಲಿಂಗಸುಗೂರು: ತಾಲ್ಲೂಕು ಕೇಂದ್ರದಿಂದ 2 ಕಿ.ಮೀ. ಅಂತರದಲ್ಲಿರುವ ಯಲಗಲದಿನ್ನಿ ಗ್ರಾಮದ ನಾಗರಿಕರಿಗೆ ಅಗತ್ಯ ಸೌಲಭ್ಯ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಕಾರ್ಯಕರ್ತರು ಶನಿವಾರ ಉಪ ವಿಭಾಗಾಧಿಕಾರಿ ಕಚೇರಿ ಶಿರಸ್ತೇದಾರ ಎನ್.ಎಂ. ಪಾಟೀಲಗೆ ಮನವಿ ಸಲ್ಲಿಸಿದರು.
ಪಟ್ಟಣದ ಭಾಗಶಃ ದಕ್ಷಿಣ ಭಾಗದ ಪ್ರದೇಶ ಯಲಗಲದಿನ್ನಿ ಸೀಮೆಯೆ ಜಮೀನಿನಲ್ಲಿ ಬಡಾವಣೆಗಳು ನಿರ್ಮಾಣಗೊಂಡು ಅಭಿವೃದ್ಧಿ ಹೊಂದುತ್ತ ಬಂದಿದೆ. ಸಾಕಷ್ಟು ಬಡಾವಣೆಗಳಿದ್ದರು ಕೂಡ ಗ್ರಾಮ ಪಂಚಾಯಿತಿ ಅಭಿವೃದ್ಧಿಪಡಿಸಲು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ನೂತನ ಬಡಾವಣೆಗಳಲ್ಲಿನ ಉದ್ಯಾನವನ ಅಭಿವೃದ್ಧಿಪಡಿಸಬೇಕು. ಸಾರ್ವಜನಿಕ ಉದ್ದೇಶಕ್ಕೆ ಮೀಸಲಿಟ್ಟ ಜಾಗೆ ಅಕ್ರಮ ಬಳಕೆ ಆಗುತಿದ್ದು ಅವುಗಳನ್ನು ತಡೆಯಬೇಕು. ಯಲಗಲದಿನ್ನಿ ಹಾಗೂ ಸುತ್ತಮುತ್ತಲ ನೂತನ ಬಡಾವಣೆಗಳಲ್ಲಿ ವಿದ್ಯುತ್ ಸಂಪರ್ಕ, ಕುಡಿವ ನೀರು, ಚರಂಡಿಗಳ ನಿರ್ಮಾಣ, ರಸ್ತೆ ಅಭಿವೃದ್ಧಿ ಕಾಮಗಾರಿಗೆ ಆದ್ಯತೆ ನೀಡುವಂತೆ ಒತ್ತಾಯಿಸಿದರು.
ಯಲಗಲದಿನ್ನಿ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಬೇಕು. ಚರಂಡಿಗಳು ತುಂಬಿ ದುರ್ನಾತ ಬೀರುತಿದ್ದು ಕೂಡಲೆ ಸ್ವಚ್ಛಗೊಳಿಸಬೇಕು.
ಸಿಟಿ ಬಸ್ ಸಂಚಾರ ಯಲಗಲದಿನ್ನಿ ಗ್ರಾಮಕ್ಕೆ ವಿಸ್ತರಣೆ ಸೇರಿದಂತೆ ಇತರೆ ಅಗತ್ಯ ಸೌಲಭ್ಯ ಕಲ್ಪಿಸುವಂತೆ ಮನವಿ ಮಾಡಿದರು.
ಜಯಕರ್ನಾಟಕ ತಾಲ್ಲೂಕು ಅಧ್ಯಕ್ಷ ಬಾಲನಗೌಡ ಮಾಲಿಪಾಟೀಲ, ಪದಾಧಿಕಾರಿ ಗಳಾದ ತಿರುಪತಿ ಯತಗಲ್, ಮುತ್ತಣ್ಣ ಗುಡಿಹಾಳ, ಲಕ್ಷ್ಮಣ ನಾಯಕ, ಬಸವರಾಜ ನಾಯಕ, ನಂದೇಶ ಪೂಜಾರಿ, ಶಿವಲಿಂಗಪ್ಪ, ಮಲ್ಲಪ್ಪ ಯಲಗಲದಿನ್ನಿ, ಬಸವರಾಜ ಕಾಳಾಪುರ, ನಿರುಪಾದಿ ಕರಡಕಲ್, ಚಂದ್ರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.